ಹೆಚ್ಚುವರಿ ಪೌರಕಾರ್ಮಿಕ ಹುದ್ದೆ ಮಂಜೂರಾತಿಗೆ ಪ್ರಸ್ತಾವನೆ: ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಸೆ.30: ಪ್ರವಾಸಿ ತಾಣವಾಗಿರುವ ಉಡುಪಿ ನಗರಸಭೆಗೆ ಹೆಚ್ಚು ವರಿ ಪೌರಕಾರ್ಮಿಕರ ಹುದ್ದೆಯನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೌರ ಕಾರ್ಮಿಕರ ಸಂಘಟನೆ ವತಿಯಿಂದ ರವಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಜಿಲ್ಲಾ ಪೌರ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಉದ್ಘಾಟನೆ ಹಾಗೂ ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹಿರಿಯ ಪೌರ ಕಾರ್ಮಿಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡುತಿದ್ದರು.
ಉಡುಪಿಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಕೇವಲ ನಗರಸಭೆ ವ್ಯಾಪ್ತಿಯ ಜನಸಂಖ್ಯೆಯನ್ನು ಮಾತ್ರವಲ್ಲದೆ ಹೊರಗಿನಿಂದ ಬರುವವರನ್ನು ಕೂಡ ಪರಿಗಣಿಸಿ ಯೋಜನೆ ರೂಪಿಸಬೇಕಾಗುತ್ತದೆ. ಅದಕ್ಕೆ ಅನುಗುಣವಾಗಿ ಪೌರ ಕಾರ್ಮಿಕರ ಹುದ್ದೆಯನ್ನು ಹೆಚ್ಚಿಸುವಂತೆ ನಗರಸಭೆ ಯಿಂದ ಸರಕಾರ ಬೇಡಿಕೆ ಸಲ್ಲಿಸಲಾಗುವುದು. ಜಿಲ್ಲೆಯ ಕೆಲವು ಪುರಸಭೆಯಲ್ಲಿ ಪೌರ ಕಾರ್ಮಿಕ ಹುದ್ದೆ ಖಾಲಿ ಇದ್ದರೂ ಸರಕಾರದ ಆದೇಶ ಬಾರದೆ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಗುತ್ತಿಗೆ ಆಧಾರಿತ ಪೌರ ಕಾರ್ಮಿಕ ಪದ್ದತಿ ರದ್ದುಗೊಳಿಸಿದ ಸರಕಾರದ ಆದೇಶ ವನ್ನು ಪ್ರಥಮವಾಗಿ ಜಾರಿಗೆ ತಂದಿರುವುದು ತುಮಕೂರು ಜಿಲ್ಲೆಯಾದರೆ, ಎರಡನೆಯದು ಉಡುಪಿ ಜಿಲ್ಲೆ. ಸಾಲಿಗ್ರಾಮ ಪಟ್ಟಣ ಪಂಚಾಯತ್, ಕಾರ್ಕಳ ಹಾಗೂ ಕಾಪು ಪುರಸಭೆಯ 2011ರ ಜನಸಂಖ್ಯೆಗೆ ಅನುಗುಣವಾಗಿ 700 ಮಂದಿಗೆ ಒಬ್ಬ ಪೌರ ಕಾರ್ಮಿಕರ ನೇಮಕಾತಿ ಮಾಡಿಕೊಳ್ಳಬೇಕೆಂಬ ನಿಯಮ ದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಆದರೆ ಉಡುಪಿ ಮತ್ತು ಕುಂದಾಪುರ ಪುರಸಭೆ ಯಲ್ಲಿ 2011ರ ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಿ ರುವುದರಿಂದ ಕೆಲವರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದರು.
ಈ ನಿಟ್ಟಿನಲ್ಲಿ ಕುಂದಾಪುರದಲ್ಲಿ ವಿಸ್ತೃತ ಯೋಜನಾ ವರದಿಯೊಂದನ್ನು ತಯಾರಿಸಿ ಚಾಲಕರು, ಲೋಡರ್ ಎಂಬ ಹುದ್ದೆ ಮಂಜೂರು ಮಾಡಿಸಿ ಕೊಂಡು ಕೈಬಿಡಲಾದ ಕೆಲವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳ ಲಾಗಿದೆ. ಉಡುಪಿಯಲ್ಲಿ ಈ ವರದಿಗೆ ಇನ್ನು ಅನುಮೋದನೆ ದೊರೆತಿಲ್ಲ.
ಉಡುಪಿಯಲ್ಲಿ ಕೈಬಿಡಲಾದ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಆ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳು ನೀಡಿರುವ ಪರಿಕರಗಳನ್ನು ಬಳಸಿ ಕೊಂಡು ಕೆಲಸ ನಿರ್ವಹಿಸಬೇಕಾಗಿದೆ. ಇದರಿಂದ ಆ ಹುದ್ದೆಗೆ ಘನತೆ ಬರುತ್ತದೆ ಹಾಗೂ ರೋಗಗಳಿಂದ ರಕ್ಷಣೆ ದೊರೆಯುತ್ತದೆ. ಪೌರಕಾರ್ಮಿಕರು ದುಶ್ಚಟ ಗಳಿಗೆ ಬಲಿಯಾದರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯ ಅಧ್ಯಯನ ಕೇಂದ್ರದ ಸಂಶೋಧಕ ಡಾ.ಆರ್.ವಿ.ಚಂದ್ರಶೇಖರ್ ಮಾತನಾಡಿ, 700 ಮಂದಿಗೆ ಒಬ್ಬ ಪೌರಕಾರ್ಮಿಕರು ಎಂಬ ಸರಕಾರದ ನಿಯಮ ಅವೈಜ್ಞಾನಿಕ ವಾಗಿದ್ದು, ಅದನ್ನು ಕೂಡಲೇ ರದ್ದು ಮಾಡಿ 500 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕರು ಎಂಬ ನಿಯಮವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು. 2018ರ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡರೆ ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಇನ್ನು ಹೆಚ್ಚುವರಿ ಕಾರ್ಮಿಕರು ಬೇಕಾಗಿ ದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಕೆ.ಬಿ.ಓಬಳೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭುಜಬಲಿ, ಜಿಲ್ಲಾ ಕಾರ್ಮಿಕ ನಿರೀಕ್ಷಕ ರಾಮಮೂರ್ತಿ ಎಸ್.ಎಸ್., ಪೌರಾಯುಕ್ತ ಜಿ.ಸಿ.ಜನಾರ್ದನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಅಚ್ಚಿರ ಕಾರ್ಕಳ, ಲಲಿತಾ ಉಡುಪಿ, ರಾಘು, ವಿಶ್ವನಾಥ್ ಕಾಪು, ಗಣೇಶ್ ಕುಂದಾ ಪುರ, ಇಂದಿರಾ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯ ದರ್ಶಿ ಪಿ.ಶಂಕರ್ ಸ್ವಾಗತಿಸಿದರು. ಸುಶೀಲಾ ನಾಡ ಕಾರ್ಯಕ್ರಮ ನಿರೂಪಿಸಿ ದರು.