ನ್ಯಾಯಾಂಗ ವ್ಯವಸ್ಥೆಯು ಸದಾ ಚಲನ ಸ್ಥಿತಿಯಲ್ಲಿರಬೇಕು: ಪ್ರೊ. ದಯಾನಂದ ನಾಯ್ಕೊ
ಮಂಗಳೂರು, ಸೆ.30: ನ್ಯಾಯಾಂಗ ವ್ಯವಸ್ಥೆಯು ದೇಶದ ಪ್ರಮುಖ ಅಂಗವಾಗಿದ್ದು, ಸಮಾಜ ಸದೃಢವಾಗಿ ಬೆಳವಣಿಗೆ ಹೊಂದಲು ಈ ಅಂಗ ತುಂಬಾ ಸಹಕಾರಿಯಾಗಿದೆ. ದೇಶದ ಕಾಯ್ದೆಗಳು ರಾಷ್ಟ್ರದ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಗಳ ಜೊತೆಯಾಗಿ ಸಾಗಬೇಕು. ಇದು ಕಾಲ ಕಾಲಕ್ಕೆ ಬದಲಾಗಬೇಕಾದ ಅವಶ್ಯಕತೆಯಿರುವುದರಿಂದ ನ್ಯಾಯಾಂಗ ವ್ಯವಸ್ಥೆಯು ಸದಾ ಚಲನಸ್ಥಿತಿಯಲ್ಲಿರಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ದಯಾನಂದ ನಾಯ್ಕೊ ಅಭಿಪ್ರಾಯಪಟ್ಟರು.
ಮಂಗಳೂರು ವಿವಿ ಕಾಲೇಜಿನ ಲಲಿತಕಲಾ ಸಂಘ ಹಾಗೂ ವಾಣಿಜ್ಯ ಸಂಘಗಳ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸುತ್ತಮುತ್ತಲಿನ ಪರಿಸರದಲ್ಲಿಯೇ ಮಾನವ ಹಕ್ಕುಗಳು ಹಲವಾರು ರೀತಿಯಲ್ಲಿ ಉಲ್ಲಂಘನೆಯಾಗುತ್ತಿದೆ. ಆದುದರಿಂದ ವಿದ್ಯಾರ್ಥಿಗಳು ಕಾನೂನು ಹಾಗೂ ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಎಂದು ಪ್ರೊ. ದಯಾನಂದ ನಾಯ್ಕೊ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಎ.ಸಿದ್ದೀಕ್, ಕಾರ್ಯಕ್ರಮದ ಸಂಯೋಜಕಿ ಮಧುಶ್ರೀ ಜೆ.ಶ್ರೀಯಾನ್, ಮುಹಮ್ಮದ್ ರಿಝ್ವಾನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಾಝೀರ್ ಹುಸೈನ್ ಸ್ವಾಗತಿಸಿದರು. ಅಶ್ವಿನಿ ಪ್ರಭು ವಂದಿಸಿದರು. ಹರ್ಷಿತ್ರಾಜ್ ಕಾರ್ಯಕ್ರಮ ನಿರೂಪಿಸಿದರು.