ದ.ಕ.ಜಿಲ್ಲಾ ಎಸ್ಪಿ ಕಚೇರಿಯಲ್ಲಿ ದಲಿತ ಕುಂದುಕೊರತೆ ಸಭೆ
ಮಂಗಳೂರು, ಸೆ.30: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 13 ಗ್ರಾಮಗಳ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿಯನ್ನು ಮೀಸಲಿಟ್ಟಿದ್ದರೂ ಕೂಡಾ ಅಧಿಕಾರಿಗಳ ನಿರ್ಲಕ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಆಗುತ್ತಿಲ್ಲ. 12 ವರ್ಷದ ಹಿಂದೆಯೇ ಈ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಪ್ರಯತ್ನ ನಡೆದಿದ್ದರೂ ಕೂಡಾ ಯಾವುದೇ ಪ್ರಯೋಜನ ಆಗಿಲ್ಲ. ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಯತ್ನಿಸಲಾಗುತ್ತಿಲ್ಲ. ಇಂತಹ ವರದಿ ಜಾರಿಯಾದರೆ ಸ್ಥಳೀಯ ಯುವಕರು ದಾರಿ ತಪ್ಪಿ ನಕ್ಸಲರಾದರೆ ಅಚ್ಚರಿ ಇಲ್ಲ ಎಂದು ಬೆಳ್ತಂಗಡಿಯ ಶೇಖರ್ ಎಲ್. ಮತ್ತು ಜಯಾನಂದ ದ.ಕ.ಜಿಲ್ಲಾ ಎಸ್ಪಿ ಕಚೇರಿಯಲ್ಲಿ ರವಿವಾರ ನಡೆದ ದಲಿತ ಕುಂದುಕೊರತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಎಸ್ಪಿ ರವಿಕಾಂತ ಗೌಡ ಉದ್ಯಾನವನ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗಲು ಕಾರಣ ಏನು ಎಂಬುದರ ಬಗ್ಗೆ ಪರಾಮರ್ಶಿಸಲು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಲಾಗುವುದು. ಅಲ್ಲದೆ, ಅವರ ನೇತೃತ್ವದಲ್ಲಿ ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ನಡೆಸಿ ತುರ್ತು ಕ್ರಮಕ್ಕೆ ಮುಂದಾಗುವೆವು. ಯಾವುದೇ ಕಾರಣಕ್ಕೂ ಯುವಕರು ದಾರಿ ತಪ್ಪದಂತೆ ಜಾಗೃತಿ ಮೂಡಿಸಲಾಗುವುದು ಎಂದರು.
ಅಭಿವೃದ್ಧಿಗೆ ತೊಡಕಾದ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಶೇಖರ್ ಆಗ್ರಹಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಬಳಿ ವರ್ಷವೊಂದರ ಹಿಂದೆಯೇ ಗಣೇಶ್ ಎಂಬವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪೊಲೀಸರು ಈ ಪ್ರಕರಣ ತನಿಖೆಯನ್ನು ಸಮರ್ಪಕವಾಗಿ ಮಾಡಿಲ್ಲ. ಹಾಗಾಗಿ ಮೃತರ ಕೆಲವು ಸ್ನೇಹಿತರನ್ನು ವಿಚಾರಣೆಗೊಳಪಡಿಸಬೇಕು ಎಂದು ದಲಿತ ಸಂಘಟನೆಯ ಮುಖಂಡ ಚಂದ್ರಶೇಖರ್ ಎಂಬವರು ಒತ್ತಾಯಿಸಿದರು.
ಬಂಟ್ವಾಳದಲ್ಲಿ ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿದ ಪ್ರಕರಣದ ಬಗ್ಗೆಯೂ ಸ್ಥಳೀಯ ಪೊಲೀಸರು ಸೂಕ್ತ ರೀತಿಯ ಕ್ರಮ ಜರುಗಿಸಿಲ್ಲ ಎಂದು ವಿಶ್ವನಾಥ್ ಎಂಬವರು ಆರೋಪಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ದಲಿತ ಸಂಘಟನೆಯ ಮುಖಂಡರಾದ ಎಸ್ಪಿ ಆನಂದ, ಹರೀಶ್ ಎಳನೀರು ಮತ್ತಿತರರು ಕೆಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭ ನಾಗರಿಕ ಹಕ್ಕು ಹಾಗೂ ಜಾರಿ ನಿರ್ದೇಶನಾಲಯದ ದ.ಕ.ಜಿಲ್ಲಾ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಎಸ್ಪಿ ವಿ.ಜೆ. ಸಜೀತ್, ಬಂಟ್ವಾಳ ಎಎಸ್ಪಿ ಎಸ್. ರಿಶಿಕೇಶ್ ಭಗವಾನ್ ಉಪಸ್ಥಿತರಿದ್ದರು.