ಕುಂದಾಪುರ ಲಾಡ್ಜ್ನಲ್ಲಿ ಶೃಂಗೇರಿಯ ಜೋಡಿ ಆತ್ಮಹತ್ಯೆ
ಕುಂದಾಪುರ, ಸೆ.30: ಶೃಂಗೇರಿಯ ಜೋಡಿಯೊಂದು ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ಲಾಡ್ಜ್ವೊಂದರ ರೂಮಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.
ಮೃತರನ್ನು ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದ ಸಿಂಧುವಳ್ಳಿಯ ನಿವಾಸಿ ಗುರುಮೂರ್ತಿ(43) ಹಾಗೂ ಅಡ್ಡಗದ್ದೆ ಗ್ರಾಮದ ನೇತ್ರಳ್ಳಿ ನಿವಾಸಿ ರಮೇಶ್ ಮೊಗವೀರ ಎಂಬವರ ಪತ್ನಿ ಶಾರದಾ (30) ಎಂದು ಗುರುತಿಸಲಾಗಿದೆ. ಇವರಿಬ್ಬರು ವಿವಾಹಿರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ.
ಕೃಷಿಕರಾಗಿರುವ ಗುರುಮೂರ್ತಿಯ ಮನೆಗೆ ಶಾರದಾ ಹಾಗೂ ರಮೇಶ್ ಕೆಲಸಕ್ಕೆ ಬರುತ್ತಿದ್ದು, ಈ ಸಂದರ್ಭ ಗುರುಮೂರ್ತಿ ಹಾಗೂ ಶಾರದಾ ಮಧ್ಯೆ ಆತ್ಮೀಯತೆ ಬೆಳೆಯಿತ್ತೆನ್ನಲಾಗಿದೆ. ಸೆ.23ರಂದು ತವರು ಮನೆಯಿಂದ ಗಂಡನ ಮನೆಗೆ ಹೊರಟಿದ್ದ ಶಾರದಾ ನಾಪತ್ತೆಯಾಗಿದ್ದರು. ಅದೇ ರೀತಿ ಗುರುಮೂರ್ತಿ ಬೆಂಗಳೂರಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಹೀಗೆ ಇವರಿಬ್ಬರು ನಾಪತ್ತೆಯಾಗಿದ್ದರು.
ಕುಂದಾಪುರಕ್ಕೆ ಆಗಮಿಸಿದ ಈ ಜೋಡಿ ಸೆ.26ರಂದು ರೂಂ ಬಾಡಿಗೆಗೆ ಪಡೆದುಕೊಂಡಿತು. ಜೀವನದಲ್ಲಿ ಜಿಗುಪ್ಸೆಗೊಂಡ ಇವರಿಬ್ಬರು ಇಂದು ಬೆಳಗಿನ ಅವಧಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಬೆಳಗ್ಗೆ 11.30ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದ್ದು, ಮನೆ ಯವರು ಆಗಮಿಸಿದ ಬಳಿಕ ರೂಮಿನ ಬಾಗಿಲು ಮುರಿದು ಮೃತದೇಹವನ್ನು ಹೊರ ತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿಕುಮಾರಚಂದ್ರ, ಕುಂದಾಪುರ ಠಾಣಾಧಿ ಕಾರಿ ಹರೀಶ್ ಆರ್.ನಾಯ್ಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.