ಮಂಗಳೂರು: ಕುರ್ಆನ್ ಹದೀಸ್ ಕಲಿಕಾ ಶಾಲೆ ಲೋಕಾರ್ಪಣೆ
ಮಂಗಳೂರು, ಸೆ.30: ಕೆಎಸ್ಎ (ಕರ್ನಾಟಕ ಸಲಫಿ ಅಸೋಸಿಯೇಶನ್ ) ಮಂಗಳೂರು ಇದರ ಸಹಯೋಗದಲ್ಲಿ ಕ್ಯುಎಚ್ಎಲ್ಎಸ್ (ಕುರ್ಆನ್ ಹದೀಸ್ ಕಲಿಕಾ ಶಾಲೆ )ಯನ್ನು ನಗರದ ಮಸ್ಜಿದುನ್ನೂರ್ ಸಮೀಪದ ಐಎಂಎ ಸಭಾಂಗಣದಲ್ಲಿ ರವಿವಾರ ನಡೆದ ಕ್ಯುಎಚ್ಎಲ್ಎಸ್ ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡಿತು.
ಕುರ್ಆನ್ ಹದೀಸ್ ಕಲಿಕಾ ಶಾಲೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಯುನಿಟಿ ಆರೋಗ್ಯ ಸಂಕೀರ್ಣದ ಚೇರ್ಮನ್ ಡಾ.ಸಿ.ಪಿ. ಹಬೀಬುರ್ರಹ್ಮಾನ್, ಇಸ್ಲಾಮ್ನ್ನು ಅಧ್ಯಯನದ ಮೂಲಕ ತಿಳಿದುಕೊಳ್ಳಬೇಕಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರು ಹಿಂದುಳಿದಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು 1-2 ವರ್ಷ ನರ್ಸರಿಗೆ ದಾಖಲಿಸಿದರೆ ಇಂಗ್ಲಿಷ್ನ್ನು ಸರಳವಾಗಿ, ಸ್ಫುಟವಾಗಿ ಮಾತನಾಡುತ್ತಾರೆ. ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಮತ್ತು ಅರೆಬಿಯಾ ಭಾಷೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ ಎಂದು ಅಭಿಪ್ರಾಯಪಟ್ಟರು.
ಮಾನವೀಯತೆಗೆ ಭಾಷೆಯು ಪ್ರಮುಖ ಸಾಧನವಾಗಿದ್ದು, ಇದರಿಂದ ವಿಚಾರಗಳನ್ನು ಮಂಡಿಸಿ, ಚರ್ಚಿಸಬಹುದಾಗಿದೆ. ಸದ್ಯ ನಡೆಯುತ್ತಿರುವ ಕುರ್ಆನ್ ಅನುವಾದಗಳು ಇನ್ನೂ ಸರಳಗೊಳ್ಳುವ ಅಗತ್ಯವಿದೆ. ಚಿಕ್ಕ ಮಕ್ಕಳು ಕೂಡ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಪ್ರಕಟಿಸಬೇಕು ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಮಕ್ಕಳು ಸಿನೆಮಾದ ನಾಯಕ, ನಾಯಕಿಯರನ್ನು ಅನುಕರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಸ್ಲಾಮ್ನ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡು ನಿಯಮಗಳನ್ನು ಪಾಲಿಸಬೇಕು. ದೇಶದಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳಿದ್ದು, ಸಂಶೋಧನೆ ಮತ್ತಿತರ ವಿಷಯಗಳಲ್ಲಿ ತಮ್ಮನ್ನು ಅಳವಡಿಸಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜೊತೆಗೆ ಇಸ್ಲಾಮ್ನ್ನು ಚಾಚುತಪ್ಪದೇ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.
ಮೌಲವಿ ಝಿಯಾ ಉರ್ರಹ್ಮಾನ್ ಸ್ವಲಾಹಿ ಪ್ರಾಸ್ತಾವಿಕವಾಗಿ ಮಾತನಾಡಿ, ಕುರ್ಆನ್ ಕಲಿಯುವವನು ಮತ್ತು ಕಲಿಸುವವನೇ ನಿಮ್ಮಲ್ಲಿ ಅತ್ಯುತ್ತಮನು ಎಂಬ ಪ್ರವಾದಿ ವಚನದ ಆಧಾರದಲ್ಲಿ ಕೆಎಸ್ಎ ಮಂಗಳೂರು ಕ್ಯುಎಚ್ಎಲ್ಎಸ್- ಕುರ್ಆನ್ ಹದೀಸ್ ಪರೀಕ್ಷೆಯ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಮಿಸ್ಬಾಹುಲ್ ಮುನೀರ್ (ತಫ್ಸೀರ್ ಇಬ್ನು ಕಸೀರ್) ಎಂಬ ಕುರ್ಆನ್ ವ್ಯಾಖ್ಯಾನ ಗ್ರಂಥದ ಆಧಾರದಲ್ಲಿ ಈ ಪರೀಕ್ಷೆಯನ್ನು ಪ್ರತಿವರ್ಷ ನಡೆಸಲಾಗುವುದು. ಎಲ್ಲ ಪ್ರಾಯದ ಜನರು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ. ಪರೀಕ್ಷೆಗೆ ಅಗತ್ಯವಿರುವ ಪಠ್ಯದ ಪ್ರತಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಕುರ್ಆನ್ ಮತ್ತು ಹದೀಸ್ನ ಜ್ಞಾನವು ಮನುಷ್ಯನ ಇಹ-ಪರ ಮೋಕ್ಷಕ್ಕೆ ಅತ್ಯಗತ್ಯವಾಗಿದೆ. ಜನರು ಕುರ್ ಆನ್ ಮತ್ತು ಹದೀಸ್ ನ ಜ್ಞಾನ ವನ್ನು ಪಡೆಯುವ ಮೂಲಕ ಕಂದಾಚಾರಗಳಿಂದ ಮುಕ್ತವಾಗಿ ನೈಜ ವಿಶ್ವಾಸಿಗಳಾಗಿ ಜೀವಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶೇಕ್ ಅಬ್ದುಲ್ ಖದೀರ್ ಉಮ್ರಿ ಉರ್ದುವಿನಲ್ಲಿ ಉಪನ್ಯಾಸ ನೀಡಿದರು. ಫೈಝಲ್ ಮೌಲವಿ ಮಲಯಾಳಂನಲ್ಲಿ ‘ಹದೀಸ್ನ ಪ್ರಾಮುಖ್ಯತೆ’ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಸ್ಎ ಮಂಗಳೂರು ಅಧ್ಯಕ್ಷ ಅಬ್ದುರ್ರಶೀದ್ ಇಂಜಿನಿಯರ್ ವಹಿಸಿದ್ದರು. ಯುನಿಟಿ ಆರೋಗ್ಯ ಸಂಕೀರ್ಣದ ಚೇರ್ಮನ್ ಡಾ.ಸಿ.ಪಿ.ಹಬೀಬುರ್ರಹ್ಮಾನ್ ಅವರನ್ನು ಕೆಎಸ್ಎ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ್ಯುಎಚ್ಎಲ್ಎಸ್ ಸಂಯೋಜಕ ನಿಶಾದ್ ಸ್ವಲಾಹಿ, ಮೂಡುಬಿದಿರೆಯ ಫುರ್ಕಾನ್ ವಿದ್ಯಾ ಸಂಸ್ಥೆಯ ಚೇರ್ಮನ್ ಮೊಯ್ದಿನ್ ಕುಂಞಿ, ಕ್ಯುಎಚ್ಎಲ್ಎಸ್ ಸಂಚಾಲಕ ಅನ್ವರ್ ಮದನಿ, ನೌಫಾಲ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೌಲವಿ ಝಿಯಾ ಉರ್ರಹ್ಮಾನ್ ಸ್ವಲಾಹಿ ಸ್ವಾಗತಿಸಿದರು. ಅಹ್ಮದ್ ಎಸ್.ಎಂ. ನಿರೂಪಿಸಿದರು. ಅಬ್ದುಲ್ ಅಝೀಝ್ ವಂದಿಸಿದರು.
ಬಹುಮಾನ, ಪ್ರಶಸ್ತಿ ವಿತರಣೆ
ಕೆಎಸ್ಎ ಬೋರ್ಡ್ನಿಂದ 2017-18ರಲ್ಲಿ ನಡೆಸಿದ 5ನೇ ತರಗತಿಯ ಮದ್ರಸ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸುಂಟಿಕೊಪ್ಪದ ಸಲಫಿ ಮದ್ರಸದ ಶಮ್ನಾಝ್ ಆರ್. (ಪ್ರಥಮ), ದೇರಳಕಟ್ಟೆಯ ಅಲ್-ಹಿಕ್ಮಾಹ್ ಸ್ಕೂಲ್ನ ಅಫ್ನಾನ್ ಫಾತಿಮಾ (ದ್ವೀತಿಯ), ಉಳ್ಳಾಲದ ಅಲ್-ಮನಾರ್ ಅರಬಿಕ್ ಮದ್ರಸದ ಕದೀಜಾ ಹನಿಯ್ಯ (ತೃತೀಯ), ಅಜ್ಜಿನಡ್ಕದ ಅಲ್-ಮದ್ರಸತುಲ್ ಇಸ್ಲಾಹಿಯ್ಯದ ಮುಹಮ್ಮದ್ ಫಹಾದ್ (ಚತುರ್ಥ), ಸುಂಟಿಕೊಪ್ಪದ ಸಲಫಿ ಮದ್ರಸದ ರಿಹಾ ಫಾತಿಮಾ (ಪಂಚಮ) ಅವರಿಗೆ ಯುನಿಟಿ ಆರೋಗ್ಯ ಸಂಕೀರ್ಣದ ಚೇರ್ಮನ್ ಡಾ.ಸಿ.ಪಿ.ಹಬೀಬುರ್ರಹ್ಮಾನ್ ನೆನಪಿನ ಕಾಣಿಕೆ, ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು.
ಡಿ. 2: ಕ್ಯುಎಚ್ಎಲ್ಎಸ್ ಪರೀಕ್ಷೆ
ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ನಡೆಸಲಾಗುವುದು. ಪರೀಕ್ಷೆಗೆ ಅಗತ್ಯವಿರುವ ಪಠ್ಯವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿತರಣೆ ಮಾಡಲಾಗುವುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಯಾ ಪ್ರದೇಶದ ಕನ್ವೀನರ್ಗಳ ಮೂಲಕ ಪರೀಕ್ಷೆಯ ಅರ್ಜಿ ನಮೂನೆಗಳನ್ನು ತುಂಬಿಸಿ 2018ರ ನವೆಂಬರ್ 18ರೊಳಗೆ ಸಲ್ಲಿಸಬೇಕು. ಪರೀಕ್ಷೆಯು ಡಿಸೆಂಬರ್ 2ರಂದು ನಡೆಯಲಿದೆ ಎಂದು ವೌಲವಿ ಝಿಯಾ ಉರ್ರಹ್ಮಾನ್ ಸ್ವಲಾಹಿ ತಿಳಿಸಿದರು.