ಅ.3: ಪುರಭವನದಲ್ಲಿ ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು, ಅ.1: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಅ. 3ರಂದು ಬೆಳಗ್ಗೆ 10 ಗಂಟೆಗೆ ನಗರದ ಪುರಭವನದಲ್ಲಿ ಬ್ಯಾರಿ ಭಾಷಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕರಂಬಾರ ಮಹಮ್ಮದ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿ.ಎಂ.ಫಾರೂಕ್, ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆರ್.ಪಿ.ನಾಯ್ಕಾ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಮ್.ಬಿ. ಅಬ್ದುಲ್ ರಹಿಮಾನ್, ರಹೀಮ್ ಉಚ್ಚಿಲ್, ಬಿ.ಎ. ಮುಹಮ್ಮದ್ ಹನೀಫ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಅಬ್ಬ ಚಲನಚಿತ್ರದ ಸಿಡಿ ಬಿಡುಗಡೆ ಮತ್ತು ಅಬ್ದುಲ್ ಸಮದ್ ಕಾಟಿಪಳ್ಳರವರಿಂದ ಬ್ಯಾರಿ ಹಾಡುಗಳ ಕಾರ್ಯಕ್ರಮ ನಡೆಯಲಿದೆ ಎಂದು ಕರಂಬಾರ ತಿಳಿಸಿದ್ದಾರೆ.
ಜ. 19ರಂದು ವಿಶ್ವ ಬ್ಯಾರಿ ಸಮ್ಮೇಳನ
ಜ. 19ರಂದು ನಗರದ ನೆಹರು ಮೈದಾನದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ರಾಜ್ಯ ಸರಕಾರ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠಕ್ಕೆ ಸರಕಾರ ಅನುಮೋದನೆ ನೀಡಿದ ಪ್ರಕಾರ ಕೆಲಸ ಪ್ರಗತಿಯಲ್ಲಿದೆ. ಬ್ಯಾರಿ ಸಮುದಾಯ ಭವನ ನಿರ್ಮಾಣಕ್ಕೂ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕರಂಬಾರ್ ಮುಹಮ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ಬಿ.ರೈ, ಸದಸ್ಯರಾದ ಬಶೀರ್ ಬೈಕಂಪಾಡಿ, ಅನ್ಸಾರ್ ಬೆಳ್ಳಾರೆ, ಹುಸೈನ್ ಕಾಟಿಪಳ್ಳ, ಆರಿಫ್ ಪಡುಬಿದ್ರೆ ಮೊದಲಾದವರು ಉಪಸ್ಥಿತರಿದ್ದರು.