ಉಡುಪಿಯಲ್ಲಿ ಹಿರಿಯ ನಾಗರಿಕರಿಗಾಗಿ ವಾಕಾಥಾನ್
ಉಡುಪಿ, ಅ.1: ಮಣಿಪಾಲ ಮಾಹೆಯ ಅಕ್ಯುಪೇಶನಲ್ ಥೆರಫಿ ವಿಭಾಗ ಹಾಗೂ ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಎರಡು ಕಿ.ಮೀ. ದೂರದ ವಾಕಾಥಾನ್ ಸೋಮವಾರ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಜ್ಜರಕಾಡು ಹುತಾತ್ಮ ಸ್ಮಾರಕದ ಸಮೀಪದ ಹಿರಿಯ ನಾಗರಿಕರ ಸಂಸ್ಥೆ ಎದುರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಮಾತನಾಡಿ, ಹಿರಿಯ ನಾಗರಿಕರು ವಿಶ್ರಾಂತ ಜೀವನದಲ್ಲಿ ಸದಾ ಲವಲವಿಕೆಯಿಂದ ಕೆಲಸ ಮಾಡುತ್ತ ಚಟುವಟಿಕೆಯಿಂದ ಇದ್ದರೆ ಆರೋಗ್ಯವಂತರಾಗಿರಲು ಸಾಧ್ಯವಾಗು ತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಮಣಿಪಾಲ ಸ್ಕೂಲ್ ಆಫ್ ಅಲೈಡ್ ಸೈನ್ಸ್ನ ಅಸೋಸಿ ಯೇಟೆಡ್ ಡೀನ್ ಡಾ.ಕೆ.ಎನ್.ಸಾಬ್, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎ.ಪಿ.ಕೊಡಂಚ ಉಪಸ್ಥಿತರಿದ್ದರು.
ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ರಾವ್ ಸ್ವಾಗತಿಸಿ ದರು. ಅಕ್ಯುಪೇಶನಲ್ ಥೆರಫಿ ವಿಭಾಗದ ಮುಖ್ಯಸ್ಥೆ ಡಾ.ಸೆಬಾಸ್ಟಿನ್ ಅನಿತಾ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಜತೆ ಕಾರ್ಯದರ್ಶಿ ದೇವರಾಜ ರಾವ್ ವಂದಿಸಿದರು. ಕಾರ್ಯದರ್ಶಿ ಭುವನೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.