ಪುರಸಭಾ ಗೋದಾಮಿನಲ್ಲಿ ಬಕೆಟ್ಗಳ ರಾಶಿ: ತಕ್ಷಣ ವಿಲೇವಾರಿ ಮಾಡುವಂತೆ ಶಾಸಕ ಸೂಚನೆ
ಬಂಟ್ವಾಳ ಪುರಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ
ಬಂಟ್ವಾಳ, ಸೆ. 1: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸೋಮವಾರ ದಿಢೀರನೇ ಬಂಟ್ವಾಳ ಪುರಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳ ಕುಂದು-ಕೊರತೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ಕುಡಿಯುವ ನೀರು, ಸಮಗ್ರ ಒಳಚರಂಡಿ ಯೋಜನೆ, ಟ್ರಾಫಿಕ್ ಸಮಸ್ಯೆ, ಕಸವಿಲೇವಾರಿ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಶಾಸಕ ಯು.ರಾಜೇಶ್ ನಾಯ್ಕ್ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು.
570 ಅನಧಿಕೃತ ನಳ್ಳಿ ಸಂಪರ್ಕ
ಎರಡನೆ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿ 90 ಕಿ.ಮೀ ಪೈಕಿ, 85 ಕಿ.ಮೀ.ಪೈಪ್ ಲೈನ್ ಪೂರ್ಣಗೊಂಡಿದ್ದು, 5,040 ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದು ಕೆಯುಡಬ್ಲ್ಯಎಸ್ನ ಶೋಭಾಲಕ್ಮ್ಮಿ ಮಾಹಿತಿ ನೀಡಿ, ಇನ್ನು ಕೂಡ ಪುರಸಭೆಗೆ ಇದನ್ನು ಹಸ್ತಾಂತರಿಸಿಲ್ಲ ಎಂದರು.
ಇದೇ ವೇಳೆ ಶಾಸಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು, ಪುರಸಭೆ ನಡೆಸಿರುವ ಸರ್ವೇ ಪ್ರಕಾರ 570 ಅನಧಿಕೃತ ನಳ್ಳಿ ಸಂಪರ್ಕ ಪತ್ತೆಯಾಗಿದೆ ಎಂದು ಉತ್ತರಿಸಿದರು. ಆಗ ಇದಕ್ಕಿಂತಲೂ ಹೆಚ್ಚು ಅನಧಿಕೃತ ನಳ್ಳಿ ಸಂಪರ್ಕಗಳಿವೆ ಶಾಸಕರು ವಾದಿಸಿದರು.
ಎರಡನೆ ಹಂತದ ಕುಡಿಯುವ ನೀರಿನ ಯೋಜನೆಯಲ್ಲಿ ಅನಧಿಕೃತ ಸಂಪರ್ಕ ಪಡೆಯದಾಗೆ ತಾಂತ್ರಿಕತೆಯನ್ನು ಅಳವಡಿಸುಂತೆ ಶಾಸಕ ರಾಜೇಶ್ ನಾಯ್ಕ್ ಕೆಯುಡಬ್ಲ್ಯಎಸ್ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯ ಕಾಮಗಾರಿಗೆ ಸಂಬಂಧಿಸಿ ಕೆಯುಡಬ್ಲ್ಯಎಸ್ನ ಶೋಭಾಲಕ್ಷ್ಮಿ ಹಾಗೂ ಕಿರಿಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ನಡುವೆ ಮಾತಿನ ಚಕಮಕಿಯು ನಡೆಯಿತು. ಆಗ ಶಾಸಕರು ಮಧ್ಯಪ್ರವೇಶಿಸಿ, ಹಿಂದೆ ಅಗಿರುವುದನ್ನು ಬಿಟ್ಟು ಮುಂದೆ ಸಮಸ್ಯೆ ಅಗದಂತೆ ಬಗೆಹರಿಸುವಂತೆ ಸಲಹೆ ನೀಡಿದರು.
2.77 ಕೋ.ರೂ. ವಿದ್ಯುತ್ ಬಿಲ್ಲು ಬಾಕಿ
ಈ ಸಂದರ್ಭ ಮಧ್ಯಪ್ರವೇಶಿಸಿದ ಮೆಸ್ಕಾಂ ಇಂಜಿನಿಯರ್ ಅವರು, ಪುರಸಭಾ ವ್ಯಾಪ್ತಿಯಲ್ಲು ಸಾಕಷ್ಟು ಅನಧಿಕೃತ ದಾರಿದೀಪಗಳು ಉರಿಯುತ್ತಿರುವ ಬಗ್ಗೆ ಸಭೆಯ ಗಮನ ಸೆಳೆದರಲ್ಲದೆ, ಪುರಸಭೆಯಿಂದ 2.77 ಕೋ.ರೂ.ವಿದ್ಯುತ್ ಬಿಲ್ಲು ಪಾವತಿಸಲು ಬಾಕಿ ಇದೆ ಎಂದರು.
ಹಾಗೆಯೇ ಕುಡಿಯುವ ನೀರಿನ ಯೋಜನೆಗೂ ಎಕ್ಸ್ ಪ್ರೆಸ್ಲೈನ್ ವಿದ್ಯುತ್ ಸಂಪರ್ಕ ಪಡೆಯದಿದ್ದು, ಮುಂದಕ್ಕೆ ವಿದ್ಯುತ್ನಲ್ಲಿ ಅಡಚಣೆಯಾಗುವ ತೊಂದರೆ ಬರಬಹುದು ಎಂದು ಸಭೆಯ ಗಮನಕ್ಕೆ ತಂದರು. ತಕ್ಷಣ ಈ ಬಗ್ಗೆ ಕಾರ್ಯ ಪ್ರವೃತ್ತರಾಗುವಂತೆ ಶಾಸಕರು ಸೂಚಿಸಿದರು. ಹಾಗೆಯೇ ನೀರಿನ ಸಮಸ್ಯೆಯ ಬಗ್ಗೆ ದೂರು ಬರುತ್ತಿದ್ದು, ಈಗಾಗಲೇ ಎರಡು ಪ್ರದೇಶಕ್ಕೆ ತಾನೇ ಟ್ಯಾಂಕರ್ ಪೂರೈಸುವ ವ್ಯವಸ್ಥೆ ಮಾಡಿದ್ದು, ಇನ್ನು ಮುಂದೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆಯ ಸೂಚಿಸಿದರು.
ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ಸೂಚನೆ
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಜಾರಿಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಶಾಸಕ ರಾಜೇಶ್ ನಾಯ್ಕಅವರು ನಿರ್ಮಲ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಪ್ಲಕ್ಸ್, ಬಂಟಿಂಗ್ಸ್ ಬಳಸಲು ಅವಕಾಶ ನೀಡಬಾರದು, ಬಿ.ಸಿ.ರೋಡಿನ ರಾ.ಹೆ.ಯ ಬಸ್ ತಂಗುದಾಣದಲ್ಲಿ ಅಳವಡಿಸಿರುವ ಜಾಹೀರಾತಿನ ಪ್ಲಕ್ಸ್ ಕೂಡ ತೆರವಿಗೆ ನಿರ್ದೇಶಿಸಿದರು. ಕಂಚಿನಡ್ಕ ಪದವಿನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ಇರುವ ಮನೆಗಳನ್ನು ಸ್ಥಳಾಂತರಿಸಲು ಇರಾ ಗ್ರಾಮದಲ್ಲಿ ಜಮೀನು ಗುರುತಿಸಲಾಗಿದೆ. ಅಲ್ಲಿ ಪೈರೋಲಿಸಿಸ್ ಯಂತ್ರ ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕಸವಿಲೇವಾರಿಯ ಗುತ್ತಿಗೆದಾರನ ಅವಧಿ ಈಗಾಗಲೇ ಪೂರ್ಣಗೊಂಡಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಶಾಸಕರಿಗೆ ಮಾಹಿತಿ ನೀಡಿದರು.
ಆಯಕಟ್ಟಿನ ಜಾಗಕ್ಕೆ ಸಿಸಿ ಕ್ಯಾಮೆರಾ
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆಯಕಟ್ಟಿನ ಏಳು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಎಸ್ಸೈ ಹರೀಶ್ ಸಭೆಯ ಗಮನಕ್ಕೆ ತಂದಾಗ ಕೆಲ ಪ್ರದೇಶಗಳಲ್ಲಿ ರಸ್ತೆಯಲ್ಲೆ ತ್ಯಾಜ್ಯ ಎಸೆದು ಗಲೀಜು ಮಾಡುವುದನ್ನು ತಡೆಗಟ್ಟಲು ಸಹಾಯವಾಗುವ ನಿಟ್ಟಿನಲ್ಲಿ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಕೂಡ ಸಿಸಿ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರರ್ವತವಾಗುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದರು. ಇದಕ್ಕೆ ಗುಣಮಟ್ಟದ ಸಿಸಿ ಕ್ಯಾಮಾರವನ್ನೇ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದರಲ್ಲದೆ, ಇದರ ನಿರ್ವಹಣೆಯನ್ನು ಪೆÇಲೀಸ್ ಇಲಾಖೆಯಿಂದಲೇ ನಡೆಸುವಂತೆಯು ನಿರ್ದೇಶಿಸಿದರು.
ಬಿ.ಸಿ.ರೋಡಿನಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ
ಬಿ.ಸಿ.ರೋಡ್ ಟ್ರಾಫಿಕ್ ಸಮಸ್ಯೆಯ ಬಗ್ಗೆ ಗಮನಸೆಳೆದ ಎಸ್ಸೈ ಮಂಜುಳಾ, ಬಿ.ಸಿ.ರೋಡಿನಲ್ಲಿ ವಾಹನ ಪಾರ್ಕಿಂಗ್ನದ್ದೆ ಬಹುದೊಡ್ಡ ಸಮಸ್ಯೆ ಎಂದರು. ಈ ಸಮಸ್ಯೆ ಬಗೆಹರಿಸಲು ಸೂಕ್ತ ಸ್ಥಳ ಪರಿಶೀಲಿಸಿ ಗಮನಕ್ಕೆ ತರುವಂತೆ ಶಾಸಕರು ಸೂಚಿಸಿದರು. ಇದೇ ವೇಳೆ ಟ್ರಾಫಿಕ್ ಠಾಣೆಗೆ ಸ್ವಂತ ಕಟ್ಟಡಕ್ಕಾಗಿ ಜಮೀನು ಒದಗಿಸುವಂತೆ ಮುಖ್ಯಾಧಿಕಾರಿಯವರಲ್ಲಿ ಮನವಿ ಮಾಡಿದರು.
ಒಟ್ಟಾರೆಯಾಗಿ ಹೊಸ ಬದಲಾವಣೆಯೊಂದಿಗೆ ಸುಂದರ ಬಂಟ್ವಾಳವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೈ ಜೋಡಿಸುವಂತೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳಲ್ಲಿ ಕೋರಿದರು.
ಸಭೆಯಲ್ಲಿ ಮಂಗಳೂರು ಸಹಾಯಕ ಕಮೀಷನರ್, ಪುರಸಭೆಯ ಆಡಳಿತಾಧಿಕಾರಿ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಕೆಯುಡಬ್ಲ್ಯಎಸ್ ಇಂಜಿನಿಯರ್ಗಳಾದ ಜಗದೀಶ್, ಸಂಶುದ್ದೀನ್, ಪುರಸಭೆಯ ಕಿರಿಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಅರಣ್ಯಾಧಿಕಾರಿ, ಪುರಸಭೆಯ ಅಧಿಕಾರಿಗಳು ಹಾಜರಿದ್ದರು.
ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸ್ವಾಗತಿಸಿ, ವಂದಿಸಿದರು.