ಅ. 2: ಕೇಂದ್ರ ಸರಕಾರದ ಆಡಳಿತ ವಿರೋಧಿಸಿ ಉಳ್ಳಾಲದಲ್ಲಿ ಪ್ರತಿಭಟನೆ
ಉಳ್ಳಾಲ, ಅ. 1: ಉಳ್ಳಾಲ ನಗರ ಕಾಂಗ್ರೆಸ್ ಹಾಗೂ ಯು.ಟಿ. ಖಾದರ್ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ಜನಜಾಗೃತಿ ಸಭೆ ಮತ್ತು ಇತ್ತೀಚೆಗೆ ನಡೆದ ಸ್ಥಳೀಯ ಪಂಚಾಯಿತಿ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆ ಸಭೆ ಅ. 2ರಂದು ಸಂಜೆ 6.30ಕ್ಕೆ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ನಡೆಯಲಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್ ಹೇಳಿದರು.
ತೊಕ್ಕೊಟ್ಟಿನ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿ ಸರಕರ, ರಫೆಲ್ ವಿಮಾನ ಖರೀದಿಯಲ್ಲಿ ಹಗರಣ, ತೈಲ ಹಾಗೂ ಅನಿಲ ಬೆಲೆ ಏರಿಕೆ, ದಿನ ನಿತ್ಯದ ಆಹಾರ ಸಾಮಗ್ರಿಗಳ ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯದ ಮುಖಂಡರು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಬಿ. ರಮನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸೇರಿದಂತೆ ಮತ್ತು ರಾಜ್ಯದ ನಾಯಕರು ಭಾಗವಹಿಸಲಿದ್ದು ಸಭೆಯಲ್ಲಿ ಬಿಜೆಪಿ ಆಡಳಿತದ ವೈಫಲ್ಯತೆ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಾತನಾಡಿ ಕೇಂದ್ರ ಸರಕಾರದ ಅಡಳಿತ ಸಂಪೂರ್ಣ ಹದೆಗೆಟ್ಟಿದೆ. ಕೊಡಗು ಹಾಗೂ ಕೇರಳದಲ್ಲಿ ಪ್ರಾಕೃತಿಕ ವಿಕೋಪ ನಡೆದಾಗ ಎರಡೂ ರಾಜ್ಯಗಳಿಗೆ ಪರಿಹಾರ ರೂಪದಲ್ಲಿ ದೊಡ್ಡ ಮೊತ್ತ ನೀಡದೆ ಆ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರ ಆಡಳಿತ ನಡೆಸುತ್ತಿದೆ ಎಂಬ ಕಾರಣದಿಂದ ಪರಿಹಾರ ನೀಡುವುದರಲ್ಲೂ ತಾರತಮ್ಯ ಮಾಡಿದೆ ಎಂದರು.
ಕಾಂಗ್ರೆಸ್ ಮುಖಂಡರುಗಳಾದ ಸದಾಶಿವ ಉಳ್ಳಾಲ್, ಪುರುಷೋತ್ತಮ ಅಂಚನ್, ಬಾಝಿಲ್ ಡಿಸೋಜ, ಮುಸ್ತಫಾ ಉಳ್ಳಾಲ್, ದಿನೇಶ್ ರೈ ಉಸ್ಮಾನ್ ಕಲ್ಲಾಪು, ಕಿಶೋರ್ ಗಟ್ಟಿ, ಇಕ್ಬಾಲ್ ಸಾಮಣಿಗೆ, ಅಬ್ದುಲ್ ರಹ್ಮಾನ್ ಉಳ್ಳಾಲ್, ಮನ್ಸೂರ್ ಹಾಗೂ ಜೋನ್ ಡಿಸೋಜ ಉಪಸ್ಥಿತರಿದ್ದರು.