ಅ.4: ವೆಲೆನ್ಸಿಯಾದಲ್ಲಿ ಜಪ ಮಾಲೆ ವರುಷಾಚರಣೆ ಪ್ರಯುಕ್ತ ಬಲಿಪೂಜೆ, ಮೆರವಣಿಗೆ
ಮಂಗಳೂರು, ಅ.1: ನಗರದ ರೊಸಾರಿಯೊ ಚರ್ಚ್ ಸ್ಥಾಪನೆಗೊಂಡು 450 ಸಂವತ್ಸರಗಳು ತುಂಬುವ ಸಂದರ್ಭದಲ್ಲಿ 2017-18ನೆ ವರ್ಷವನ್ನು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯಕ್ಕೆ ಜಪಮಾಲೆಯ ವರುಷ ಎಂದು ಸಾರಲಾಗಿದೆ ಎಂದು ಕಾರ್ಯಕ್ರಮದ ಸಂಗಟಕರಾದ ವಂ.ಓನಿಲ್ ಡಿ ಸೋಜ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತ ಅಂತೋನಿ ಆಶ್ರಮ ಜೆಪ್ಪು; ಸಂತ ವಿನ್ಸೆಂಟ್ ಫೆರರ್ ದೇವಾಲಯ ವೆಲೆನ್ಸಿಯಾ, ಸಂತ ಜೊಸೆಫ್ ದೇವಾಲಯ ಜೆಪ್ಪು ಮತ್ತು ಸಂತ ರೀತ ದೇವಾಲಯ ಕಾಸ್ಸಿಯಾ ಇದರ ನೇತೃತ್ವದಲ್ಲಿ ಜಪ ಮಾಲೆಯ ಮಾತೆಯ ಹಬ್ಬವನ್ನು ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ರಾಂತ ಬಿಷಪ್ ಅತಿ.ವಂ.ಡಾ ಅಲೊಶಿಯಸ್ ಪಾವ್ಲ್ ಡಿ ಸೋಜ ಅ. 4ರಂದು ಸಾಯಂಕಾಲ 5 ಗಂಟೆಗೆ ವೆಲೆನ್ಸಿಯಾ ದೇವಾಲಯದಲ್ಲಿ ಬಲಿಪೂಜೆ ಅರ್ಪಿಸಲಿದ್ದಾರೆ. ಬಳಿಕ ಮನಪಾ ಮೇಯರ್ ಭಾಸ್ಕರ್ ಕೆ.ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾತೆ ಮರಿಯಮ್ಮನವರ ಮೆರವಣಿಗೆ ಸಂತ ಅಂತೋನಿ ಆಶ್ರಮದವರೆಗೆ ಸಾಗಲಿದೆ. ಅಲ್ಲಿ ಕುಟುಂಬ ಪ್ರಾರ್ಥನೆ, ಪ್ರವಚನ ಮತ್ತು ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವಿರುತ್ತದೆ ಎಂದು ವಂ.ಓನಿಲ್ ಡಿ ಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಂ.ಜೇಮ್ಸ್ ಡಿ ಸೋಜ, ಸ್ಟಾನಿ ಡಿಕುನ್ಹಾ ಹಾಜರಿದ್ದರು.