‘ಸುಪ್ರೀಂ ಕೋರ್ಟ್ ತೀರ್ಪಿಗೆ ಮೇಲ್ಮನವಿ’
ಉಡುಪಿ, ಅ.1: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಿ ದೇಶದ ಅತ್ಯುನ್ನತ ನ್ಯಾಯಾಲಯ ನೀಡಿದ ತೀರ್ಪು ದುರದೃಷ್ಟಕರವಾಗಿದ್ದು, ಇದು ಅಯ್ಯಪ್ಪ ಭಕ್ತರಿಗೆ ನೋವನ್ನುಂಟು ಮಾಡಿದೆ. ಇದರ ವಿರುದ್ಧ ಶೀಘ್ರವೇ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಬರಿಮಲ ಅಯ್ಯಪ್ಪ ಸೇವಾ ಸಮಾಜಂನ ಉಡುಪಿ ಜಿಲ್ಲಾಧ್ಯಕ್ಷ ಗಿರೀಶ್ ಜಿ.ಎನ್.ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿಲ್ಲ. ಆದರೆ 10ರಿಂದ 50ವರ್ಷದೊಳಗಿನ ಮಹಿಳೆಯರಿಗೆ ಮಾತ್ರ ಪ್ರವೇಶ ನಿಷಿದ್ಧವಾಗಿತ್ತು ಎಂದರು.
ಅಯ್ಯಪ್ಪ ದೇವಸ್ಥಾನದ ಅವಹೇಳನ ಮಾಡುವ ಪ್ರಯತ್ನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಅಲ್ಲಿನ ಅರವಣ ಪಾಯಸಂನಲ್ಲಿ ಇಲಿ ಬಿದ್ದಿದೆ, ಮಕರ ಜ್ಯೋತಿ ಸುಳ್ಳು, ಮುಲ್ಲಪೆರಿಯಾರ್ ಅಣೆಕಟ್ಟಿನ ಕುರಿತಂತೆಯೂ ದೇವಸ್ಥಾನದ ಹೆಸರನ್ನು ಹಾಳುಮಾಡುವ ಪ್ರಯತ್ನ ನಡೆದಿತ್ತು ಎಂದವರು ವಿವರಿಸಿದರು.
ಶಬರಿಮಲೆ ದೇವಸ್ಥಾನದ ಕುರಿತಂತೆ ಸರಕಾರ ಆಗಲಿ, ನ್ಯಾಯಾಲಯ ವಾಗಲೀ ಯಾವುದೇ ತೀರ್ಪು ನೀಡದೇ, ದೇವಳದ ಭಕ್ತರು, ಅರ್ಚಕರು ಹಾಗೂ ತಂತ್ರಿಗಳು ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು. ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಅ.15ರೊಳಗೆ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದವರು ತಿಳಿಸಿದರು. ಕಾಪು ತಾಲೂಕು ಅಧ್ಯಕ್ಷ ಗೋಪಾಲ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.