ಸ್ವಚ್ಛ, ಪಾರದರ್ಶಕ ಆಡಳಿತ: ದಿನಕರ ಬಾಬು
ಮಣಿಪಾಲ, ಅ.1: ಕಳೆದ ಎರಡೂವರೆ ವರ್ಷಗಳ ಆಡಳಿತಾವಧಿಯಲ್ಲಿ ಉಡುಪಿ ಜಿಪಂಗೆ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತವನ್ನು ನೀಡಿದ್ದೇವೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಬಂದ ಅನುದಾನಗಳ ಸದ್ಭಳಕೆಯಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸ್ವಚ್ಛ ದರ್ಪಣ್ ಶ್ರೇಯಾಂಕದಲ್ಲಿ ಉಡುಪಿ ಜಿಲ್ಲೆ ದೇಶದಲ್ಲೇ ನಂ.1ನೇ ಸ್ಥಾನವನ್ನು ಪಡೆದಿದೆ. ಅದೇ ರೀತಿ ಭಾರತದ ಗುಣಮಟ್ಟ ನಿಗಮದ ಸಮೀಕ್ಷೆಯಲ್ಲಿ 7ನೇ ಸ್ವಚ್ಛ ಜಿಲ್ಲೆಯೆಂಬ ಹೆಗ್ಗಳಿಕೆ ಉಡುಪಿಗೆ ಸಿಕ್ಕಿದೆ ಎಂದರು.
ರಾಜ್ಯಮಟ್ಟದ ವಿಶ್ವ ಪರಿಸರ ದಿನಾಚರಣೆಯಂದು ಘನ ಮತ್ತು ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆಯಲ್ಲಿ, ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಉಡುಪಿ ಜಿಲ್ಲೆಗೆ ರಾಜ್ಯ ಪರಿಸರ ಪ್ರಶಸ್ತಿ ಮುಖ್ಯಮಂತ್ರಿಗಳಿಂದ ಪಡೆದಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಎಸ್ಎಲ್ಆರ್ಎಂ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈಗಾಗಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವರು ಘಟಕವೊಂದಕ್ಕೆ ಭೇಟಿ ನೀಡಿ ಇದನ್ನು ಪ್ರಶಂಸಿಸಿದ್ದಾರೆ ಎಂದು ದಿನಕರ ಬಾಬು ನುಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಟ್ಟು 18.86 ಕೋಟಿ ರೂ.ಗಳನ್ನು ವಿನಿಯೋಗಿಸಿ 2434 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.ಇದರಲ್ಲಿ 6.60ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ವಿವರಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 3.45 ಕೋಟಿ ಮೊತ್ತದಲ್ಲಿ ನಿಟ್ಟೆ ಹಾಗೂ 5 ಕೋಟಿ ರೂ.ಮೊತ್ತದಲ್ಲಿ ಹೆಬ್ರಿ ಎರಡನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕುಂದಾಪುರದ ನಾಡಾ ಗ್ರಾಮದ 10.50 ಕೋಟಿ ರೂ.ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರಾತಿ ಪಡೆದಿದ್ದು, ಅನುಷ್ಠಾನಗೊಳ್ಳುತ್ತಿದೆ. ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ 22.19 ಕೋಟಿ ರೂ. ಅನುದಾನವನ್ನು ವಿನಿಯೋಗಿಸಿ ಒಟ್ಟು 1049 ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೇ.83 ಸಾಧನೆ ಮಾಡಲಾಗಿದೆ ಎಂದು ದಿನಕರ ಬಾಬು ಹೇಳಿದರು.
ಜಿಲ್ಲೆಯನ್ನು ಪ್ಲಾಸ್ಠಿಕ್ ಮುಕ್ತ ಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಅಭಿಯಾನಕ್ಕೆ ಗಾಂಧಿ ಜಯಂತಿಯ ದಿನದಂದು ಕಾರ್ಕಳದಲ್ಲಿ ಚಾಲನೆ ನೀಡಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಟಿ.ಬಾಬು ಶೆಟ್ಟಿ, ಉದಯ ಕೋಟ್ಯಾನ್ ಉಪಸ್ಥಿತರಿದ್ದರು.