ಪ್ರಥಮ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಶಿಪ್ ಯೋಜನೆ: ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿಗೆ ರಾಷ್ಟ್ರೀಯ ಅಗ್ರಪ್ರಶಸ್ತಿ
ಪ್ರಧಾನಿಯಿಂದ 2 ಲಕ್ಷ ರೂ. ನಗದು, ಪ್ರಶಸ್ತಿ ಸ್ವೀಕಾರ
ಉಡುಪಿ, ಅ.1: ಕೇಂದ್ರ ಸರಕಾರದ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಶಿಪ್ ಯೋಜನೆಯಲ್ಲಿ ಈಗಾಗಲೇ ರಾಜ್ಯಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದ ಬ್ರಹ್ಮಾವರ ಸಮೀಪದ ಚೇರ್ಕಾಡಿ ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿ, ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ನಾಳೆ ಅ.2ರಂದು ಹೊಸದಿಲ್ಲಿಯಲ್ಲಿ ನಡೆಯುವ 150ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪತ್ರ ಹಾಗೂ ಎರಡು ಲಕ್ಷ ರೂ.ನಗದು ಬಹುಮಾನವನ್ನು ಪಡೆಯಲಿದೆ.
ಕಳೆದ ಮೇ 1ರಿಂದ ಜುಲೈ31ರ ತನಕ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದಿದ್ದ ಸಮೃದ್ಧಿ ಮಹಿಳಾ ಮಂಡಳಿ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಿಂದ ಪ್ರಥಮ ಸ್ಥಾನ ಪಡೆದು ಆಯ್ಕೆಗೊಂಡ ಯುವಕ/ಯುವತಿ ಮಂಡಳಗಳೊಂದಿಗೆ ಸ್ಪರ್ಧಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನು್ನ ಪ್ರತಿನಿಧಿಸುವ ಅರ್ಹತೆ ಪಡೆದಿತ್ತು.
ರಾಷ್ಟ್ರ ಮಟ್ಟದಲ್ಲಿ ಅಂತಿಮ ಘಟ್ಟದ ಆಯ್ಕೆ ಪ್ರಕ್ರಿಯೆ ಹೊಸದಿಲ್ಲಿಯಲ್ಲಿ ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ನೇತೃತ್ವದಲ್ಲಿ ಸೆಪ್ಟೆಂಬರ್ ಕೊನೆಯ ವಾರ ನಡೆದಿತ್ತು. ಸ್ಪರ್ಧೆಯ ಕೊನೆಯಲ್ಲಿ ಸಚಿವಾಲಯದ ಫಲಿತಾಂಶವನ್ನು ಪ್ರಕಟಿಸಿದಾಗ, ಕರ್ನಾಟಕ ರಾಜ್ಯ ಉಡುಪಿ ಜಿಲ್ಲೆ ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿ ಪ್ರಥಮ ಸ್ವಚ್ಛ ಭಾರತ ಸಮ್ಮರ್ ಇಂಟರ್ನ್ಶಿಪ್ ಯೋಜನೆಯಲ್ಲಿ ರಾಷ್ಟ್ರ ಮಟ್ಟದಲ್ಲೇ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿತ್ತು.
ಗ್ರಾಮ ಮಟ್ಟದಲ್ಲಿ ನಡೆದ ಸ್ವಚ್ಛತಾ ಕಾರ್ಯಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿರುವ ಈ ತಂಡ, 100ಗಂಟೆಗೂ ಅಧಿಕ ಶ್ರಮದಾನ ನಡೆಸಿದ್ದಲ್ಲದೇ, ಹಲವು ಕಡೆಗಳಲ್ಲಿ ಸ್ವಯಂ ಸೇವೆ ನಡೆಸುವ ಮೂಲಕ ಸ್ಥಳೀಯರ ಹಾಗೂ ಜಿಲ್ಲಾ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜ್ಯ ಮಟ್ಟದಲ್ಲಿ ಮಹಿಳಾ ಸಂಘಕ್ಕೆ ರಾಜ್ಯ ಪ್ರಶಸ್ತಿಯೊಂದಿಗೆ 50,000ರೂ. ಪ್ರಥಮ ಬಹುಮಾನವನ್ನು ಈಗಾಗಲೇ ಪಡೆದುಕೊಂಡಿದೆ.
ಸಮೃದ್ಧಿ ಮಹಿಳಾ ಮಂಡಳಿಯ ಸದಸ್ಯೆಯರು ಪ್ರತಿ ಶನಿವಾರ ಮತ್ತು ರವಿವಾರಗಳಂದು ಜೊತೆಯಾಗಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತಿದ್ದರು. ವಿಜೇತ ಸಮೃದ್ಧಿ ಮಹಿಳಾ ಮಂಡಳಿಯ ನೇತೃತ್ವ ವಹಿಸಿರುವ ಪ್ರಸನ್ನ ಪಿ. ಭಟ್ ಅವರಿಗೆ ತಮ್ಮ ತಂಡ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆದಿರುವುದು ಅತೀವ ಸಂತಸ ತಂದಿದೆ ಎಂದರು. ಇನ್ನು ಮುಂದೆ ಕೂಡ ಸ್ವಚ್ಛಭಾರತದ ಕನಸನ್ನು ನನಸು ಮಾಡಲು ಗ್ರಾಮ ಮಟ್ಟದಲ್ಲಿ ತಮ್ಮ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ಸ್ಥಳೀಯ ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ಯುವಜನ ಸಮನ್ವಯಾ ಧಿಕಾರಿ ಹಾಗೂ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಜಿಲ್ಲಾ ನೊಡಲ್ ಅಧಿಕಾರಿಯಾದ ವಿಲ್ಫ್ರೆಡ್ ಡಿಸೋಜ ಅವರು ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿಗೆ ಪ್ರಶಸ್ತಿ ಒಲಿದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿರುವುದಕ್ಕೆ ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿಯನ್ನು ಅಭಿನಂದಿಸಿದ್ದಾರೆ.
ಇದೀಗ ಸಮೃದ್ಧಿ ಮಹಿಳಾ ಮಂಡಳಿಯ ಪ್ರತಿನಿಧಿಗಳು ಹೊಸದಿಲ್ಲಿಗೆ ತೆರಳಿದ್ದು, ನಾಳೆ ಅ.2ರಂದು ನಡೆಯುವ 150ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಪ್ರಧಾನಿಯಿಂದ ಬಹುಮಾನ ಪಡೆಯಲಿದ್ದಾರೆ ಎಂದು ಉಡುಪಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.