ನವಜಾತ ಶಿಶುವನ್ನು ಕೊಲೆಗೈದು ಹೂತು ಹಾಕಿದ್ದ ಪ್ರಕರಣ: ಆರೋಪಿ ತಂದೆ ಸೆರೆ
ಬೆಳ್ತಂಗಡಿ, ಅ.1: ನವಜಾತ ಶಿಶುವನ್ನು ಕೊಲೆಗೈದು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತಂದೆಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ಶಿವಪ್ಪ(45) ಬಂಧಿತ ಆರೋಪಿ.
ಹಲವು ವರ್ಷಗಳ ಹಿಂದೆ ಕೂಲಿ ಕೆಲಸಕ್ಕೆಂದು ಪಟ್ರಮೆ ಗ್ರಾಮಕ್ಕೆ ಬಂದಿದ್ದ ಶಿವಪ್ಪ ಸ್ಥಳೀಯ ನಿವಾಸಿ ಪುಷ್ಪಾ ಎಂಬಾಕೆಯೊಡನೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದು, ಈ ಸಂಬಂಧದಿಂದ ಇವರಿಗೆ ಒಂದು ಮಗು ಇದೆಯೆನ್ನಲಾಗಿದೆ. ಇದರ ಬಳಿಕವೂ ಈ ಅಕ್ರಮ ಸಂಬಂಧ ಮುಂದುವರಿದಿದ್ದು ಅದರ ಪರಿಣಾಮವಾಗಿ ಆಕೆ ಮತ್ತೆ ಗರ್ಭವತಿಯಾಗಿದ್ದು, ಸೆ.23ರಂದು ಪುಷ್ಪಾ(45)ತನ್ನ ಮನೆಯಲ್ಲಿಯೇ ಗಂಡು ಶಿಶುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆಕೆ ಶಿಶುವಿನೊಂದಿಗೆ ತನ್ನ ಪ್ರಿಯಕರ ಶಿವಪ್ಪನೊಡಗೂಡಿ ಆಕೆಗೆ ಗ್ರಾಪಂನಿಂದ ಮಂಜೂರಾದ ಮನೆಗೆ ತೆರಳಿದ್ದು, ಈ ವೇಳೆ ಆಕೆಯೊಂದಿಗೆ ಪುಷ್ಪಾಳ ಮೊದಲನೆಯ ಮಗಳು ಹೋಗಿದ್ದಾಳೆ. ಆದರೆ ಸೆ.24ರಂದು ಪುಷ್ಪಾಳ ಮೊದಲನೇ ಮಗಳು ಅಮಿತಾಕ್ಷಿ ತನ್ನ ತಾಯಿಯ ಮನೆಗೆ ಬಂದು ತನ್ನ ತಾಯಿ ಹಾಗೂ ಶಿವಪ್ಪ ಸೇರಿಕೊಂಡು ಮಗುವನ್ನು ಮಣ್ಣಿನೊಳಗೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದ ಪುಷ್ಪಾಳ ಸಹೋದರ ಸಂಜೀವ ಧರ್ಮಸ್ಥಳ ಠಾಣೆಗೆ ಈ ಬಗ್ಗೆ ಮಾಹಿತಿ ಹಾಗೂ ದೂರು ನೀಡಿದ್ದಾರೆನ್ನಲಾಗಿದೆ.
ದೂರನ್ನು ಪರಿಶೀಲಿಸಿದ ಧರ್ಮಸ್ಥಳ ಪೊಲೀಸರು ತಹಶೀಲ್ದಾರ್ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಘಟನೆಯ ಮಾಹಿತಿ ಪಡೆದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ ತಂಡ ಪ್ರಕರಣದ ಬೆನ್ನು ಹತ್ತಿದ್ದು ಆರೋಪಿ ಶಿವಪ್ಪನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಾನು ಮಗುವನ್ನು ಹತ್ಯೆ ಮಾಡಿ ಮಣ್ಣಲ್ಲಿ ಹೂತು ಹಾಕಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್ ಅವರ ಸಮ್ಮುಖದಲ್ಲಿ ಆರೋಪಿಯನ್ನು ಕರೆತಂದು ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಆರೋಪಿ ನೀಡಿದ ಮಾಹಿತಿಯಂತೆ ಶಿಶುವನ್ನು ಹೂತು ಹಾಕಿದ್ದ ಜಾಗವನ್ನು ಅಗೆದು ಇಂದು ಮೃತದೇಹವನ್ನು ಹೊರತೆಗೆಯಲಾಗಿದೆ. ಬಳಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮಗುವಿನ ತಾಯಿ ಪುಷ್ಪಾ ತಲೆ ಮರೆಸಿಕೊಂಡಿದ್ದು, ಲಭ್ಯ ಮಾಹಿತಿಯಂತೆ ಆಕೆ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.