ಗಾಂಧಿ ವಿಚಾರಧಾರೆಗಳು ಸಾರ್ವಕಾಲಿಕ: ಸಚಿವ ಯು.ಟಿ. ಖಾದರ್
ಮಂಗಳೂರಿನ ಪುರಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ
ಮಂಗಳೂರು, ಅ. 2: ಸಮಾಜ ಸೇವೆಯ ಕೆಲಸ ಮಾಡುವವರಾಗಲೀ, ಪ್ರಾಮಾಣಿಕ ಜೀವನ್ನಡೆಸುವ ಆಶಯವನ್ನು ಹೊಂದಿರುವವರಿಗೆ ಗಾಂಧೀಜಿ ಮೌಲ್ಯಗಳೆ ಇಂದಿಗೂ, ಎಂದೆಂದಿಗೂ ಆದರ್ಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಿಸಿದ್ದಾರೆ.
ಅವರು ದ.ಕ. ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಪುರಭವನಲ್ಲಿ ನಡೆದ ಗಾಂಧಿ ನಮನ ಕಾರ್ಯಕ್ರಮ ಉದ್ಘಾಟಿಸಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಗಾಂಧೀಜಿಯನ್ನು ಮರೆಯುವ ಪ್ರಯತ್ನ ಅಥವಾ ಅವರನ್ನು ಕೊಂದವರ ವೈಭವೀಕರಿಸುವ ಪ್ರಯತ್ನಗಳು ನಡೆಯಬಹುದು. ಆದರೆ ಅವರು ಬೋಧಿಸಿದ ಅಹಿಂಸಾ ಮಾರ್ಗವೇ ಶ್ರೇಷ್ಠ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.
ಭಾರತ ಎಂದರೆ ಗಾಂಧೀಜಿ, ಗಾಂಧೀಜಿ ಎಂದರೆ ಭಾರತ ಎಂಬ ಗ್ರಹಿಕೆ ಜಗತ್ತಿನಲ್ಲಿದೆ. ಈ ಗ್ರಹಿಕೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕ್ಷಮಾ ಗುಣ, ಅರ್ಥಗರ್ಭಿತ ಚಿಂತನೆಯನ್ನು ಹೊಂದಿದ್ದ ವ್ಯಕ್ತಿ ಅವರು. ಆದ್ದರಿಂದ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರ ವಿಚಾರ ಧಾರೆಯೆ ಮಾರ್ಗದರ್ಶನ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಗಾಂಧೀಜಿಯವರ ಆದರ್ಶಗಳು ನಮಗೆ ಮಾದರಿಯಾಗಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಅಂಕಣಕಾರ ಡಾ. ನರೇಂದ್ರ ರೈ ದೇರ್ಲ, ಗಾಂಧಿ ಬಂದ ಕಾದಂಬರಿಯನ್ನು ಉಲ್ಲೇಖಿಸಿ ಮಾತನಾಡಿದರು.
ಜಾತ್ರೆ ಆದರೆ ಹಿಂದೂಗಳು ಸೇರುತ್ತಾರೆ. ಉರೂಸ್ ಆದರೆ ಮುಸ್ಲಿಮರು, ಸಾಂತುಮಾರಿ ಆದಾಗ ಕ್ರೈಸ್ತರು ಸೇರುತ್ತಾರೆ. ಆದರೆ ಗಾಂಧಿ ಬಂದರೆ ಎಲ್ಲರೂ ಸೇರುತ್ತಾರೆ. ಆದ್ದರಿಂದ ನಮಗೆ ಗಾಂಧಿ ದೈವದ ಅಗತ್ಯವಿದೆ ಎನ್ನುತ್ತಾ ಕಾದಂಬರಿಯ ಪಾತ್ರವೊಂದನ್ನು ವಿವರಿಸಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷ ತೆ ವಹಿಸಿದ್ದರು. ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇಗೌಡ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಪಂ ಸಿಇಒ ಡಾ. ಸೆಲ್ವಮಣಿ ಆರ್. ಉಪಸ್ಥಿತರಿದ್ದರು.
ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೋಹಿಣಿ ಸ್ವಾಗತಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು.