'ವಾರದಲ್ಲಿ ಮರಳುಗಾರಿಕೆ ಅವಕಾಶ ನೀಡದಿದ್ದರೆ ಪ್ರತಿಭಟನೆ'
ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಎಚ್ಚರಿಕೆ
ಮಂಗಳೂರು, ಅ.2: ಕಳೆದ ನಾಲ್ಕು ತಿಂಗಳಿಂದ ಜಿಲ್ಲಾದ್ಯಂತ ಮರಳುಗಾರಿಕೆ ಸ್ಥಗಿತಗೊಂಡಿದ್ದು, ನಿರ್ಮಾಣ ಕಾಮಗಾರಿಗಳು ಮರಳಿಲ್ಲದೆ ಅರ್ಧದಲ್ಲಿದೆ. ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಲಕ್ಷದಿಂದ ಇಷ್ಟೊಂದು ದೀರ್ಘ ಕಾಲಿಕ ಸಮಸ್ಯೆಯುಂಟಾಗಿದ್ದು, ಇನ್ನೊಂದು ವಾರದಲ್ಲಿ ಮರಳುಗಾರಿಕೆಗೆ ಅವಶಕಾಶ ಸಿಗದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಿವಿಲ್ ಕಂಟ್ರಾಕ್ಟರ್ಸ್ ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.
ಮರಳುಗಾರಿಕೆ ಪರವಾನಗಿ ನವೀಕರಿಸದ ಕಾರಣ ಮುಂದಿಟ್ಟು ಜಿಲ್ಲಾಧಿಕಾರಿ ಮರಳುಗಾರಿಕೆ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಇದರಿಂದ ಕಟ್ಟಡ ನಿರ್ಮಾಣದಲ್ಲಿ ದಿನಕೂಲಿಗಳಾಗಿ ಕೆಲಸ ಮಾಡುವ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೆ ಮರಳುಗಾರಿಕೆಯನ್ನು ಕಾನೂನಿನ ನೆಪವೊಡ್ಡಿ ನಿಷೇಧಿಸಿರುವುದು ಸರಿಯಲ್ಲ. ಕಳೆದ ವರ್ಷ ಡಿಸೆಂಬರ್ ವರೆಗೆ ಮರಳು ಸಿಗದೆ ಸಮಸ್ಯೆಯಾಗಿತ್ತು. ಮರಳುಗಾರಿಕೆ ನಿಷೇಧದಿಂದಾಗಿ ಅಕ್ರಮ ಮರಳುಗಾರಿಕೆ ದಂಧೆಗಳು ಹೆಚ್ಚಾಗಿದ್ದು, ಲಕ್ಷಾಂತರ ರೂ.ರಾಜಧನ ಸರ್ಕಾರಕ್ಕೆ ವಂಚಿಸಲ್ಪಡುತ್ತಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಎಂ.ಪುರುಷೋತ್ತಮ ಕೊಟ್ಟಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮರಳುಗಾರಿಕೆ ನಿಷೇಧ ಕಾರ್ಮಿಕರನ್ನು ಮತ್ತು ಗುತ್ತಿಗೆದಾರರನ್ನು ಸಾಲದ ಕೂಪಕ್ಕೆ ತಳ್ಳಿ, ರೈತರಂತೆ ಆತ್ಮಹತ್ಯೆ ಮಾಡಲು ಪ್ರಚೋದನೆ ನೀಡಿದಂತಾಗುತ್ತದೆ. ಪ್ರಸ್ತುತ ಕರಾವಳಿ ನಿಯಂತ್ರಣ ವಲಯ ಹೊರತಾದ ಪ್ರದೇಶದಲ್ಲಿ ಟೆಂಡರ್ ಮೂಲಕ ಮರಳುಗಾರಿಕೆಗೆ ಅವಕಾಶ ನೀಡಿದರೂ ಅದು ಅವ್ಯವಸ್ಥೆಯಿಂದ ಕೂಡಿದೆ. ಈಗಾಗಲೇ ನದಿಯಲ್ಲಿ ನೀರು ಇಳಿದು ಮರಳು ದಿಬ್ಬಗಳು ಗೋಚರಿಸುತ್ತಿವೆ. ಗುತ್ತಿಗೆದಾರರು ಹಾಗೂ ಕಾರ್ಮಿಕರ ಸಹನೆ ಮೀರಿದ್ದು, ವಾರದೊಳಗೆ ಮರಳುಗಾರಿಕೆ ಆರಂಭಕ್ಕೆ ಅನುಮತಿ ಸಿಗದಿದ್ದರೆ, ಪ್ರತಿಭಟನೆ ಅನಿವಾರ್ಯ ಎಂದರು
ಉಪಾಧ್ಯಕ್ಷ ಮಹಾಬಲ ಕೊಟ್ಟಾರಿ, ಕಾರ್ಯದರ್ಶಿ ರಾಮಕೃಷ್ಣ ರಾವ್, ಜತೆ ಕಾರ್ಯದರ್ಶಿ ಅಶೋಕ್ ಕುಲಾಲ್, ಕೋಶಾಧಿಕಾರಿ ಸುರೇಶ್ ಜೆ. ಉಪಸ್ಥಿತರಿದ್ದರು.