ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಗೆ ಸ್ವಪಕ್ಷೀಯರಿಂದಲೇ ಮುತ್ತಿಗೆ
ಭಾರತ ಬಂದ್ ಘಟನೆ ಬಗ್ಗೆ ಆಕ್ರೋಶ, ಎಸ್ಪಿ ಎತ್ತಂಗಡಿಗೆ ಒತ್ತಾಯ
ಉಡುಪಿ, ಅ.2: ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ. ಜಯಮಾಲಾ ಅವರು ಇಂದು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸ್ವಪಕ್ಷೀಯರಿಂದಲೇ ಮುತ್ತಿಗೆಗೆ ಒಳಗಾಗಿ ತೀವ್ರ ಮುಜುಗರದ ಸನ್ನಿವೇಶ ಅನುಭವಿಸಿದರು.
ಕಾಂಗ್ರೆಸ್ ಭವನದಲ್ಲಿ ನಡೆದ ‘ಗಾಂಧಿ-150’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವೆ, ಕಾರ್ಯಕ್ರಮ ಮುಗಿದ ಬಳಿಕ ಕೆಲಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ಇದ್ದು, ಬಳಿಕ ಹೊರಡಲೆಂದು ಸಿದ್ಧರಾಗುತಿದ್ದಾಗ ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿ ಇರಿಸುಮುರಿಸು ಅನುಭವಿಸಿದರು.
ಭಾರತ್ ಬಂದ್ ವೇಳೆ ಉಡುಪಿಯಲ್ಲಿ ನಡೆದ ಅಹಿತಕರ ಘಟನೆ, ಗಲಭೆ ಹಾಗೂ ಬನ್ನಂಜೆಯ ಎಸ್ಪಿ ಕಚೇರಿ ಎದುರು ನಡೆದ ಲಾಠಿ ಚಾರ್ಜ್ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಪಕ್ಷದ ಕಾರ್ಯಕರ್ತರ ನೆರವಿಗೆ ಬಂದಿಲ್ಲ. ತಮ್ಮ ಕಷ್ಟ-ನೋವುಗಳನ್ನು ಆಲಿಸಿಲ್ಲ ಎಂಬುದು ಅವರ ಆಕ್ರೋಶಕ್ಕೆ ಮೂಲ ಕಾರಣವಾಗಿತ್ತು.
ಪಕ್ಷದ ಕಾರ್ಯಕರ್ತರು ಪೊಲೀಸರ ಲಾಠಿ ಏಟನ್ನು ತಿಂದಾಗ ನೀವು ಕಾರ್ಯಕರ್ತರ ನೋವನ್ನು ಆಲಿಸಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಲ್ಲ. ಅದಕ್ಕೆ ಬದಲು ಎಸ್ಪಿ ಮನೆಗೆ ಗಣಪತಿಯನ್ನು ನೋಡಲು ಹೋಗಿ ಊಟ ಮಾಡಿ ಬಂದಿದ್ದೀರಿ ಎಂದು ಜಯಮಾಲಾ ವಿರುದ್ಧ ಆರೋಪಗಳ ಸುರಿಮಳೆಗೆರೆದರು.
ಪಕ್ಷದ ಕಾರ್ಯಕರ್ತರಾದ ನಮಗೆ ನ್ಯಾಯಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಎತ್ತಂಗಡಿ ಮಾಡಿ ಎಂದು ಅವರು ಸಚಿವೆಯನ್ನು ಆಗ್ರಹಿಸಿದರು. ಕಾರ್ಯಕರ್ತರ ಆಕ್ರೋಶಕ್ಕೆ ಸಮಜಾಯಿಷಿ ನೀಡಿದ ಜಯಮಾಲ, ನಾನು ವಿಷಯ ತಿಳಿದ ತಕ್ಷಣ ಈ ಬಗ್ಗೆ ಎಸ್ಪಿಯವರಿಗೆ ದೂರವಾಣಿ ಮೂಲಕ ಮಾತನಾಡಿದ್ದೆ. ಅಲ್ಲದೇ ಜಿಲ್ಲಾ ನಾಯಕರೊಂದಿಗೂ ಮಾತನಾಡಿದ್ದೆ ಎಂದರು.
‘ಹೀಗೆ ಮಾಧ್ಯಮವನ್ನು ಮುಂದಿಟ್ಟುಕೊಂಡು ನನ್ನನ್ನು ಹೆದರಿಸಲು ಬರಬೇಡಿ’ ಎಂದ ಜಯಮಾಲ ಕಾರಿನತ್ತ ತೆರಳಿ ಅದರಲ್ಲಿ ಕುಳಿತು ಅಲ್ಲಿಂದ ತೆರಳಿದರು.
ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕಾರ್ಯಕರ್ತರಾದ ವಿಶ್ವಾಸ್ ಅಮೀನ್, ಮಂಜುನಾಥ ಉಪ್ಪೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.