ಗಾಂಧೀ ಜಯಂತಿ: ಆರೋಗ್ಯಕ್ಕಾಗಿ ಮಂಗಳಗಂಗೋತ್ರಿ-ಮುಡಿಪುವರೆಗೆ ಕಾಲ್ನಡಿಗೆ ಜಾಥಾ
ಕೊಣಾಜೆ, ಅ. 2: ನಮ್ಮ ಬದುಕಿನಲ್ಲಿ ಅದೆಷ್ಟೋ ಸಂತಸದ ಕ್ಷಣಗಳಿದೆ. ಅದರೆ ಆ ಅಮೂಲ್ಯವಾದ ಕ್ಷಣಗಳನ್ನು ಕ್ಷುಲ್ಲಕ ವಿಚಾರಗಳಿಗೆ ತಲೆಕೆಡಿಸಿ, ನಕಾರಾತ್ಮಕವಾಗಿ ಚಿಂತಿಸುತ್ತಾ ಕಳೆದುಕೊಳ್ಳುತ್ತಿದ್ದೇವೆ. ಅದರಿಂದ ಬದುಕಿನುದ್ದಕ್ಕೂ ಪ್ರತಿಕ್ಷಣ ಒತ್ತಡ ತರುತ್ತದೆ. ಜೊತೆಗೆ ಸಮಾಜದಲ್ಲಿ ಸಾಮರಸ್ಯ ಸಹೋದರತ್ವಕ್ಕೆ ಭಂಗ ತರುವುದೇ ಹೊರತು ಮಾನಸಿಕ ನೆಮ್ಮದಿಯಾಗಲೀ ವಿಶಾಲ ಚಿಂತನೆಯ ಮನಸ್ಸು ನಮ್ಮದಾಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಗಾಂಧೀ ಜಯಂತಿ ಪ್ರಯುಕ್ತ ಮುಡಿಪು ವರ್ತಕರ ಸಂಘ, ಆಯುಷ್ ಇಲಾಖೆ, ಸಾರ್ವಜನಿಕರು ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಮುಡಿಪು ಜಂಕ್ಷನ್ ತನಕ ನಡೆದ "ನಮ್ಮ ನಡಿಗೆ ಆರೋಗ್ಯದ ಕಡೆಗೆ" ಕಾಲ್ನಡಿಗೆ ಜಾಥಾದ ಬಳಿಕ ಮುಡಿಪು ಜಂಕ್ಷನ್ನಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಸಮಸ್ಯೆಗಳು ಸರ್ವೆ ಸಾಮಾನ್ಯ. ನಮಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿ ಸವಾಲುಗಳನ್ನು ದಿಟ್ಟತನದಿಂದ ಎದುರಿಸಬೇಕು. ಸಕಾರಾತ್ಮಕ ಚಿಂತನೆಯಿಂದ ನಮ್ಮ ಬದುಕನ್ನು ಸಂತಸದಿಂದ ಕಳೆಯಲು ಸಾಧ್ಯ ಎಂದು ಹೇಳಿದರು.
ನಮ್ಮ ಜೀವನಶೈಲಿ, ಆಹಾರ ಸೇವನೆ ಪದ್ಧತಿಯಲ್ಲಿ ನಿಗಾ ಇರಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಕೂಡಾ ಆಹಾರದ ಮೇಲೆ ಶಿಸ್ತುಬದ್ಧ ಜೀವನ ಕ್ರಮ ಅಳವಡಿಸಿಕೊಂಡಿದ್ದರು. ಅವರ ತತ್ವ ಆದರ್ಶಗಳು ನಮಗೆ ವಿದೇಶದಲ್ಲಿಯೂ ಗೌರವ ತಂದುಕೊಟ್ಟಿದೆ. ಅದಕ್ಕಾಗಿ ನಾವು ನಿತ್ಯದ ಆಹಾರ ಸೇವನೆಯಲ್ಲಿ ಮಾಂಸಹಾರ ಕಡಿಮೆ ಮಾಡಿ ಸಸ್ಯಹಾರದತ್ತ ಗಮನಹರಿಸುವುದು ಆರೋಗ್ಯ ದೃಷ್ಟಿಯಿಂದ ಹಾಗೂ ಸ್ವಾಸ್ಥ್ಯ ಸಮಾಜದ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ ಎಂದರು.
ಆಯುಷ್ ಇಲಾಖೆಯ ವೈದ್ಯ ಡಾ. ಸಂದೀಪ್ ಕುಮಾರ್ ಮಾತನಾಡಿ ಮಧುಮೇಹ, ಹೃದ್ರೋಗದಿಂದ ಪಾರಾಗಲು ನಿತ್ಯವೂ ಶಾರೀರಿಕ ವ್ಯಾಯಾಮ ಅಗತ್ಯ. ಭಾರತ ಮಧುಮೇಹದ ರಾಜಧಾನಿಯಾಗುತ್ತಿದ್ದು ಪ್ರಪಂಚದೆಲ್ಲೆಡೆ ಸಾಂಕ್ರಾಮಿಕ ರೋಗಕ್ಕಿಂತಲೂ ಸಾಂಕ್ರಾಮಿಕವಲ್ಲದ ರೋಗಗಳೇ ಮನುಷ್ಯನಲ್ಲಿ ಆತಂಕ ಸೃಷ್ಟಿಸುತ್ತದೆ. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದರು.
ಮಂಗಳೂರು ವಿವಿ ಮುಖ್ಯ ದ್ವಾರದ ಬಳಿಯಿಂದ ಆರಂಭಗೊಂಡ ಆರೋಗ್ಯ ನಡಿಗೆ ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ,.ಎಂ.ಖಾನ್ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ. ಎಸ್. ಗಟ್ಟಿ, ಲಯನ್ಸ್ ರಾಜ್ಯಪಾಲ ದೇವದಾಸ್ ಭಂಡಾರಿ ಕುರ್ನಾಡು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಪಿ. ಕರ್ಕೇರ, ಮಾಜಿ ಸದಸ್ಯ ಉಮರ್ ಪಜೀರು, ಡಾ. ಸುರೇಖ, ಹಿರಿಯರಾದ ರಮೇಶ್ ಶೇಣವ, ಅರುಣ್ ಗರಡಿಪಳ್ಳ, ಜಗದೀಶ್ ಪಲಾಯಿ ಮುಡಿಪು, ಶೆರೀಫ್ ಚೆಂಬೆತೋಟ, ಇನ್ಫೋಸಿಸ್ನ ವಾಸು, ಧೀರಜ್ ಹಾಗೂ ಹರೀಶ್, ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ. ಶ್ರೀನಿವಾಸನ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಶೀರ್ ಮುಡಿಪು, ಮುರಳೀಧರ ಶೆಟ್ಟಿ ಮೋರ್ಲ ಹಾಗೂ ರೆಹ್ಮಾನ್ ಮರಿಕ್ಕಳ ಹಾಗೂ ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ ಸ್ವಾಗತಿಸಿದರು. ಮುಡಿಪು ವರ್ತಕರ ಸಂಘದ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಾಸಿರ್ ನಡುಪದವು ವಂದಿಸಿದರು.