ನಿಘಂಟು ರಚನೆಯ ಬಳಿಕ ಭಾಷೆಯ ಘನತೆ ಹೆಚ್ಚಿವೆ: ಪ್ರೊ. ಬಿ.ಎಂ.ಇಚ್ಲಂಗೋಡು
‘ಬ್ಯಾರಿ ಅಧ್ಯಯನ ಪೀಠ-ಪ್ರಥಮ ಬ್ಯಾರಿ ನಿಘಂಟು’ ಕುರಿತು ಅವಲೋಕನಾ ಸಭೆ
ಮಂಗಳೂರು, ಅ. 2: ಸಾವಿರಾರು ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆಗೆ ಸಂಬಂಧಿಸಿ ಕಳೆದ ವರ್ಷ ಪ್ರಕಟಗೊಂಡಿರುವ ನಿಘಂಟಿನ ಮಹತ್ವ ಏನು ಎಂಬುದು ಸದ್ಯಕ್ಕೆ ಮುಖ್ಯವಾಗಲಾರದು. ಆದರೆ ಭವಿಷ್ಯದಲ್ಲಿ ಬ್ಯಾರಿ ಭಾಷೆ, ಜನಾಂಗ, ಸಾಹಿತ್ಯ, ಸಂಸ್ಕೃತಿ, ಕಲೆಯ ಬಗ್ಗೆ ಅಧ್ಯಯನ ಮಾಡುವ ಸಂದರ್ಭ ಈ ನಿಘಂಟಿನ ಪ್ರಾಮುಖ್ಯತೆ ಅರಿವಿಗೆ ಬರುತ್ತದೆ. ಸದ್ಯ ನಿಘಂಟು ರಚನೆಯ ಬಳಿಕ ಬ್ಯಾರಿ ಭಾಷೆಯ ಘನತೆ ಹೆಚ್ಚಿರುವುದು ವೇದ್ಯವಾಗುತ್ತಿದೆ ಎಂದು ಹಿರಿಯ ಸಂಶೋಧನ ಪ್ರೊ. ಬಿ.ಎಂ. ಇಚ್ಲಂಗೋಡು ಅಭಿಪ್ರಾಯಪಟ್ಟರು.
ಬ್ಯಾರಿ ಭಾಷಾಭಿಮಾನಿಗಳ ವೇದಿಕೆಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ಪೂರ್ವಭಾವಿಯಾಗಿ ಭಾಷಾಭಿಮಾನಿಗಳ ಸಮ್ಮಿಲನ ಮತ್ತು ಬ್ಯಾರಿ ಅಧ್ಯಯನ ಪೀಠ ಹಾಗು ಪ್ರಥಮ ಬ್ಯಾರಿ ನಿಘಂಟು ಕುರಿತು ನಗರದ ಶ್ರೀನಿವಾಸ ಹೊಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅವಲೋಕನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ನಿಘಂಟು ಪೂರ್ಣವಲ್ಲ, ಕಾಲ ಕಾಲಕ್ಕೆ ಹೊಸ ಹೊಸ ಶಬ್ದಗಳ ಸೇರ್ಪಡೆಯೊಂದಿಗೆ ಪರಿಷ್ಕೃತಗೊಳ್ಳಲಿದೆ. ಕೇವಲ 3 ವರ್ಷದ ಅವಧಿಯಲ್ಲಿ 20 ಸಾವಿರ ಶಬ್ದಗಳನ್ನಷ್ಟೇ ಕ್ರೋಢೀಕರಿಸಲು ಸಾಧ್ಯವಾಯಿತು. ಇನ್ನೂ ಕಾಲಾವಕಾಶವಿದ್ದಿದ್ದರೆ 40 ಸಾವಿರ ಶಬ್ದಗಳನ್ನು ಸೇರಿಸಬಹುದಿತ್ತು. ಸೀಮಿತ ಅವಧಿಯಲ್ಲಿ ನಡೆದ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದ ಪ್ರೊ.ಬಿ. ಎಂ. ಇಚ್ಲಂಗೋಡು ಜಗತ್ತಿನ ಯಾವ ಭಾಷೆಯೂ ಪರಿಪೂರ್ಣವಲ್ಲ. ವಿಶ್ವದ ಭಾಷೆ ಎಂದು ಹೇಳಲಾಗುವ ಇಂಗ್ಲಿಷ್ ಕೂಡಾ ಸಾಕಷ್ಟು ಲ್ಯಾಟಿನ್ ಭಾಷೆಯ ಶಬ್ದಗಳನ್ನು ಎರವಲು ಪಡೆದುಕೊಂಡಿವೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಸರಕಾರ ಅಕಾಡಮಿಯನ್ನು ಅಸ್ತಿತ್ವಕ್ಕೆ ತಂದ ಬಳಿಕ ಬ್ಯಾರಿ ಭಾಷೆಗೊಂದು ಮಾನ್ಯತೆ ಲಭಿಸಿದೆ. ನನ್ನ ಅಧಿಕಾರವಧಿಯಲ್ಲಿ ಬ್ಯಾರಿ ನಿಘಂಟು, ಬ್ಯಾರಿ ಸಾಕ್ಷಚಿತ್ರ, ಬ್ಯಾರಿ ಭವನಕ್ಕೆ ಜಮೀನು ಖರೀದಿ, ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಇತ್ಯಾದಿ ಕೆಲಸ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಎಂದರು.
ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ವಿದ್ವಾಂಸ ಎ.ವಿ.ನಾವಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದುಕ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಜೆ.ಹುಸೈನ್, ಅಕಾಡಮಿಯ ಸದಸ್ಯ ಬಶೀರ್ ಬೈಕಂಪಾಡಿ, ಮಾಜಿ ಸದಸ್ಯ ಖಾಲಿದ್ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.
ಅಕಾಡಮಿಯ ಮಾಜಿ ಸದಸ್ಯರಾದ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು, ಯೂಸುಫ್ ವಕ್ತಾರ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.