ಉಡುಪಿ: ಗಾಂಧಿಸ್ಮೃತಿ ವಿಚಾರ ಸಂಕಿರಣ- ಜನಜಾಗೃತಿ ಜಾಥಾ
ಉಡುಪಿ, ಅ.2: ಗಾಂಧೀಜಿ ನಂತರ ಪಾನಮುಕ್ತ ಭಾರತಕ್ಕಾಗಿ ಶ್ರಮಿಸು ತ್ತಿರುವ ಸಂಸ್ಥೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಗಿದೆ. ಇಂದು ಕುಡಿತದ ಚಟಕ್ಕೆ ಒಳಗಾಗಿ ವ್ಯಸನಮುಕ್ತರಾದವರಲ್ಲಿ ಶೇ.75ರಷ್ಟು ಮಂದಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಪರ್ಯಾಯ ಪಲಿಮಾರು ಮಠ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಹಾಗೂ ತಾಲೂಕು ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಸಹಯೋಗದೊಂದಿಗೆ 150ನೆ ಗಾಂದಿ ಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಮಂಗಳವಾರ ರಾಜಾಂಗಣದಲ್ಲಿ ಆಯೋಜಿಸಲಾದ ಜನಜಾಗೃತಿ ಜಾಥಾ ಹಾಗೂ ಗಾಂಧಿಸ್ಮತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದಯಾನಂದ ಕತ್ತಲ್ಸಾರ್ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ 25 ಮಂದಿಯನ್ನು ವ್ಯಸನ ಮುಕ್ತರನ್ನಾಗಿಸಿದ ಭೋಜ ಪಾಣರರಿಗೆ ಜಾಗೃತಿ ಮಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಭಾಷಣ ಸ್ಪರ್ಧೆಯ ವಿಜೆೀತರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ದಿನಕರ ಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ವೇದಿಕೆಯ ಜಿಲ್ಲಾಧ್ಯಕ್ಷ ನವೀನ್ ಅಮೀನ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ದೇವದಾಸ್ ಹೆಬ್ಬಾರ್, ನಗರಸಭೆ ಸದಸ್ಯೆ ಮಾನಸಿ ಪೈ ಉಪಸ್ಥಿತರಿದ್ದರು.
ಜನಜಾಗೃತಿ ವೇದಿಕೆಯ ಉಡುಪಿ ವಲಯ ಅಧ್ಯಕ್ಷ ಶಿವಕುಮಾರ್ ಅಂಬಲ ಪಾಡಿ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಪ್ರಾಸ್ತಾವಿಕ ವಾಗಿ ಮಾತನಾಡಿದರು. ಯೋಜನಾಧಿಕಾರಿ ರೋಹಿತ್ ಎಚ್. ವಂದಿಸಿದರು. ಪ್ರೇಮ್ಪ್ರಸಾದ್ ಹಾಗೂ ಆಶಾ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಉಡುಪಿ ಸಿಂಡಿಕೇಟ್ ಬ್ಯಾಂಕ್ ಕೆಥೋಲಿಕ್ ಸೆಂಟರ್ ಬಳಿ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು. ಜಾಥವು ಕೆ.ಎಂ. ಮಾರ್ಗ, ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣ, ಕಲ್ಸಂಕ ಮಾರ್ಗವಾಗಿ ರಾಜಾಂಗಣಕ್ಕೆ ಸಾಗಿಬಂತು.