ಬೂದಿಮಿಶ್ರಿತ ಮಳೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ: ಜಯಮಾಲ
ಉಡುಪಿ, ಅ.2: ಉಡುಪಿ ಹಾಗೂ ಜಿಲ್ಲೆಯ ಕೆಲವು ಕಡೆಗಳಲ್ಲಿ ಇತ್ತೀ;ಚೆಗೆ ಸಂಭವಿಸಿದ ಬೂದಿ ಮಿಶ್ರಿತ ಮಳೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಸರಕಾರದ ಗಮನ ಸೆಳೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.
ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಚಿವೆ ಮಾಧ್ಯಮಗಳೊಂದಿಗೆ ಮಾತನಾಡುತಿದ್ದರು. ಈ ಬಗ್ಗೆ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ತನಿಖೆಯ ಬಳಿಕ ಸಲ್ಲಿಸುವ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಬಿದ್ದ ಬೂದಿಮಿಶ್ರಿತ ಮಳೆಯ ಕುರಿತು ಸುರತ್ಕಲ್ನ ಎನ್ಐಟಿಕೆ ಹಾಗೂ ಮಣಿಪಾಲದ ಎಂಐಟಿ ಎರಡು ವ್ಯತಿರಿಕ್ತ ವರದಿ ನೀಡಿರುವ ಕುರಿತು ಅವರ ಗಮನ ಸೆಳೆದಾಗ, ಬೂದಿ ಮಳೆಯ ಬಗ್ಗೆ ನನಗೆ ಗೊತ್ತಿಲ್ಲ. ಅದು ನಂಬಲು ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ಅಧ್ಯಯನವಾಗಬೇಕು. ಇದಕ್ಕಾಗಿಯೇ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸರಕಾರಕ್ಕೆ ಕೇಳಿಕೊಳ್ಳುತ್ತೇನೆ. ಈ ಬೂದಿ ಮಿಶ್ರಿತ ಮಳೆಗೆ ಇಲ್ಲಿನ ಕೈಗಾರಿಕೆಗಳೇ ಕಾರಣವಾದರೆ ಮುಂದೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದೇ ಗೊತ್ತಿಲ್ಲ. ರಾಜ್ಯ ಸರಕಾರ ರೈತರಿಗೆ ಶಕ್ತಿಮೀರಿ ಸಹಾಯ ಮಾಡಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ರೈತರಿಗೆ ಎಲ್ಲಾ ರೀತಿಯ ಸಹಾಯದ ಭರವಸೆ ನೀಡಿದ್ದಾರೆ. ಎಲ್ಲದಕ್ಕೂ ಆತ್ಮಹತ್ಯೆಯೊಂದೇ ಪರಿಹಾರ ಅಲ್ಲ. ರಾಜ್ಯದ ರೈತರು ಸಹನೆಯಲ್ಲಿ ಇರಬೇಕೆಂದು ಸಚಿವೆ ಮನವಿ ಮಾಡಿದರು.
ಭಾರತ್ ಬಂದ್, ರೇಲ್ ಹಗರಣ ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆ ನಂತರ ನಡೆದ ಘಟನೆಯ ಬಗ್ಗೆಯೂ ಮಾಹಿತಿ ಕೊಡಲಿಲ್ಲ. ನಾನು 30 ಜಿಲ್ಲೆಗಳಿಗೂ ಹೋಗಬೇಕಾಗಿದೆ. ಇಲ್ಲೇ ಕುಳಿತಿರುವುದಕ್ಕೆ ಆಗುತ್ತಾ? ಎಂದವರು ಪತ್ರಕರ್ತರಿಗೆ ಮರುಪ್ರಶ್ನೆ ಎಸೆದರು.
ಜಿಲ್ಲಾ ಉಸ್ತುವಾರಿಯಾಗಿ ನಾನು ಆಗಾಗ ಉಡುಪಿಗೆ ಬಾರದೇ ಹೋದರೂ ಬೆಂಗಳೂರಿನಲ್ಲೇ ಕುಳಿತು ಉಡುಪಿ ಕೆಲಸ ಮಾಡುತಿದ್ದೇನೆ. ಮೊದಲ ಬಾರಿಗೆ ಮರಳು ಸಮಸ್ಯೆಗೆ ಸಂಬಂಧಿಸಿ ಸಭೆ ಕರೆದಿದ್ದೇನೆ. ಜಿಲ್ಲೆ ಹಾಗೂ ಜನರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.