ಗಾಂಧಿ ಮೌಲ್ಯಗಳನ್ನು ಉಳಿಸಲು ಹೋರಾಟ: ವಿಷ್ಣುನಾಥನ್
ಉಡುಪಿ ಕಾಂಗ್ರೆಸ್ ಭವನದಲ್ಲಿ ಗಾಂಧಿ-150
ಉಡುಪಿ, ಅ.2: ಇಂದು ಇಡೀ ವಿಶ್ವ ಗಾಂಧೀಜಿಯವರ ತತ್ವ-ಸಿದ್ಧಾಂತವನ್ನು ಮೆಚ್ಚಿ, ಈ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ. ಪರಿಸರ, ಶಿಕ್ಷಣ, ಕೋಮು ಸೌಹಾರ್ದತೆಯ ಬಗ್ಗೆ ಗಾಂಧೀಜಿಯವರ ಮೂಲಕವೇ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಭಾರತದಲ್ಲಿ ನಾವು ಗಾಂಧಿ ವೌಲ್ಯಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದು ಎಐಟಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಲಯ ಉತ್ಸುವಾರಿ ವಿಷ್ಣುನಾಥನ್ ಹೇಳಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಯಾದ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಆಶ್ರಯದಲ್ಲಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ‘ಗಾಂಧಿ-150’ ಕಾರ್ಯಕ್ರಮ ವನ್ನು ಮಂಗಳವಾರ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗಾಂಧೀಜಿ ಹಾಕಿಕೊಟ್ಟ ಸೌಹಾರ್ದತೆಯ ಎಳೆಗಳು ಇಂದು ಶಿಥಿಲ ಗೊಳ್ಳುತ್ತಿವೆ. ತಾನು ನಂಬಿದ ವೌಲ್ಯಗಳಿಗೆ ಜೀವವನ್ನೇ ಬಲಿಗೊಟ್ಟ ಗಾಂಧಿ, ತೋರಿದ ಬೆಳಕು ಹಾಗೂ ತೋರಿಸಿದ ದಾರಿ ಅಪಾಯವನ್ನು ಎದುರಿಸುತ್ತಿದೆ. ದೇಶದ ಪರಮೋಚ್ಚ ಸಂವಿಧಾನ ಇಂದು ಬೆದರಿಕೆಯನ್ನು ಎದುರಿಸುತ್ತಿದೆ. ಸಂವಿಧಾನದ ಸಂಸ್ಥೆಗಳಾದ ಸಂಸತ್ತು, ಸುಪ್ರೀಂ ಕೋರ್ಟ್ ಅಪಾಯದಲ್ಲಿದೆ ಎಂದು ವಿಷ್ಣುನಾಥನ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಮಾತನಾಡಿ, ಇಂದು ಮಹಿಳೆ ಏನಾದರೂ ತಲೆ ಎತ್ತಿ ನಿಂತು ಆತ್ಮವಿಶ್ವಾಸದಿಂದ ನಡೆಯುತಿದ್ದರೆ ಅದಕ್ಕೆ ಮೂಲ ಕಾರಣರು ಗಾಂಧಿ. ಗಾಂಧಿ ಪ್ರತಿಯೊಬ್ಬರ ಮನಸ್ಸಿನಲ್ಲಿ, ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅವರು ಇತ್ತೀ;ಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ ಹಾಗೂ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಜಿಲ್ಲಾ ರಾಜೀವ್ಗಾಂಧಿ ಪಂಚಾಯತ್ರಾಜ್ ಸಂಘಟನೆಯ ವತಿಯಿಂದ ಜಯಮಾಲಾರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಎಐಸಿಸಿ ಕಾರ್ಯದರ್ಶಿ ಸಂದೀಪ್, ಜಿ.ಎ.ಬಾವಾ, ನವೀನ್ ಡಿಸೋಜ, ರಾಕೇಶ್ ಮಲ್ಲಿ, ಶಿವಾನಂದ ಸ್ವಾಮಿ, ಅಮೃತ್ ಶೆಣೈ, ವೆಂಕಟೇಶ್, ಲಾವಣ್ಯ ಬಲ್ಲಾಳ್, ಇಸ್ಮಾಯಿಲ್ ಆತ್ರಾಡಿ, ವರೋನಿಕಾ ಕರ್ನೇಲಿಯೊ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆ ಸಂಯೋಜಕಿ ರೋಶನಿ ಒಲಿವೆರಾ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೆ ಮುನ್ನ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಂಧಿ ಜೀವನ ಚರಿತ್ರೆ ಕುರಿತಂತೆ ರಸಪ್ರಶ್ನೆ ಸ್ಪರ್ಧೆ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಸಿರಿಲ್ ಮಥಾಯಸ್ರಿಂದ ಗಾಂಧಿ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.