ಉಡುಪಿ: ವಿಶ್ವ ಹೃದಯ ದಿನಾಚರಣೆ
ಉಡುಪಿ, ಅ.2: ಪ್ರಾಥಮಿಕ ಚಿಕಿತ್ಸಾ ಮಾಹಿತಿಗಳು ಜನಸಾಮಾನ್ಯರಿಗೂ ಅತೀ ಅಗತ್ಯ. ಇದರಿಂದ ತುರ್ತು ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ ಎಂದು ಅಪರ ಜಿಲ್ಲಾಕಾರಿ ವಿದ್ಯಾಕುಮಾರಿ ಹೇಳಿದರು.
ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದೆ ಪ್ರಾಕೃತಿಕ ವಿಕೋಪದಂತಹ ದುರಂತಗಳ ಸಂದರ್ಭದಲ್ಲಿ ಇಂತಹ ಪ್ರಾಥಮಿಕ ಚಿಕಿತ್ಸಾ ಮಾಹಿತಿಗಳು ಬಹಳಷ್ಟು ಪ್ರಯೋಜನಕಾರಿ ಎಂದವರು ತಿಳಿಸಿದರು.
ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ದೇಶದಲ್ಲಿ ಶೇ. 60ರಷ್ಟು ಹೃದಯಾಘಾತಗಳು ಸಾರ್ವಜನಿಕ ಸ್ಥಳಗಳಲ್ಲಿ ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಹೃದಯ ಕಾಯಿಲೆ ಬಗ್ಗೆ ಮಾಹಿತಿ ಇದ್ದರೆ ರೋಗಿಯ ಪ್ರಾಣ ಉಳಿಸಲು ಸಾಧ್ಯವಿದೆ. ಹೃದಯ ಕಾಯಿಲೆ ಬರದಂತೆ ತಡೆಯಲು ಯೋಗ ತುಂಬಾ ಸಹಕಾರಿ. ಹೃದಯ ಕಾಯಿಲೆಯನ್ನು ತಡೆಯಲು ಮಾನಸಿಕ ಆರೋಗ್ಯವೂ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಂಸಿಯ ಹೃದಯ ತಜ್ಞ ಡಾ. ಟಾಮ್ ದೇವಸ್ಯ, ಕೆಎಂಸಿ ಡೀನ್ ಪ್ರಜ್ಞಾ ರಾವ್, ರೋಟರಿ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಗಣೇಶ್ ಎ., ಡಾ.ಜಯರಾಜ್, ಡಾ. ವಿನೋದ್ ನಾಯಕ್, ಉಮೇಶ್ ಸಾಲ್ಯಾನ್, ಡಾ. ವೀಣಾ ಕಾಮತ್ ಮುಂತಾದವರು ಉಪಸ್ಥಿತರಿದ್ದರು.