ಭ್ರಷ್ಟ ಮನಸ್ಥಿತಿಯಲ್ಲಿ ಬದುಕುವ ನಮಗೆ ಬೇರೆ ಸರ್ಕಾರದ ಬಯಕೆ ಯೋಗ್ಯವೇ ?-ಎಸ್.ಎನ್ ಸೇತುರಾಂ
ಆಳ್ವಾಸ್ನಲ್ಲಿ ತಿಂಗಳ ಚಿಂತನ
ಮೂಡುಬಿದಿರೆ, ಅ. 2: ದಾಸ್ಯವೇ ಅಭ್ಯಾಸವಾದ ನಮ್ಮ ಸಮಾಜದಲ್ಲಿ ಆತ್ಮಗೌರವ ಸತ್ತುಹೋಗಿದ್ದು ಯಾವುದು ನಮ್ಮನ್ನು ಕಾಯುತ್ತದೆ ಎಂದು ಭಾವಿಸಿದ್ದೇವೆಯೋ ಅದುವೇ ನಮ್ಮನ್ನು ಲೂಟಿ ಮಾಡಿದರೆ ಕಷ್ಟ, ಭ್ರಷ್ಟ ಮನಸ್ಥಿತಿಯಲ್ಲಿರುವ ನಾವು ಮನ್ನಣೆ ಪಡೆಯಬೇಕಾದರೆ ಯೋಗ್ಯತೆಯನ್ನು ಸರಿಪಡಿಸಿಕೊಳ್ಳಬೇಕು, ಭ್ರಷ್ಟ ಮನಸ್ಥಿತಿಯಲ್ಲಿಯೇ ಬದುಕುವ ನಮಗೆ ಬೇರೆ ಸರ್ಕಾರವನ್ನು ಆಶಿಸುವ ಯೋಗ್ಯತೆ ಇದೆಯೇ ? ಎಂದು ನಟ, ನಿರ್ದೇಶಕ, ಕತೆಗಾರ ಮತ್ತು ರಂಗಕರ್ಮಿ ಎಸ್.ಎನ್ ಸೇತುರಾಂ ಹೇಳಿದರು.
ಅವರು ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಭವನದಲ್ಲಿ ಸೋಮವಾರ ನಡೆದ ತಿಂಗಳ ಚಿಂತನ ಕಾರ್ಯಕ್ರಮದಲ್ಲಿ ಭ್ರಷ್ಟ ಸಮಾಜ ಕುಟುಂಬ ವ್ಯವಸ್ಥೆಯ ಮೇಲೆ ಅದರ ಪರಿಣಾಮ ಎಂಬ ವಿಷಯದ ಕುರಿತು ಮಾತನಾಡಿದರು.
ಸಮಾಜ ಭ್ರಷ್ಟವಾಗುತ್ತಿದ್ದಂತೆ ಆ ಸಮಾಜವು ಕಾಡಾಗಿ ಪರಿವರ್ತನೆಯಾಗುತ್ತದೆ, ಮನುಷ್ಯ ಪ್ರಾಣಿಯಾಗಿ ಮಾರ್ಪಾಡು ಹೊಂದುತ್ತಾನೆ. ಪ್ರಾಣಿ ಪ್ರಪಂಚದಲ್ಲಿ ದುರ್ಬಲರಿಗೆ, ಅನಾರೋಗ್ಯ ಪೀಡಿತರಿಗೆ ಜೀವಿಸುವ ಅವಕಾಶ ಇರದಿರುವಂತಹ ಸ್ಥಿತಿ ಭ್ರಷ್ಟ ಸಮಾಜಕ್ಕೆ ಬಂದೊದಗುತ್ತದೆ ಎಂದರು.
ಇಂದಿನ ಸನ್ನಿವೇಶದಲ್ಲಿ ಮುದುಕರಿಗೆ ಅಸ್ತಿತ್ವವಿಲ್ಲ. ಯುವಜನಾಂಗಕ್ಕೆ ಮುದುಕರ ಮತ್ತು ಅವರ ಚಿಂತನೆಯ ಅಗತ್ಯವಿಲ್ಲ. ಮುದುಕರ ಮತ್ತು ಯುವ ಜನಾಂಗದ ನಡುವೆ ಏರ್ಪಡುವ ಸೈದ್ಧಾಂತಿಕ ತಾಕಲಾಟ ಭ್ರಷ್ಟ ಮನೋಸ್ಥಿಯ ಫಲಶೃತಿಯಾಗಿದೆ ಎಂದರು.
ಕಪ್ಪು ಹಣದ ಲಂಪಟತನ
ಲಂಚ ಕೊಡುವಲ್ಲಿ ಕಪ್ಪುಹಣವೇ ಬಳಕೆಯಾಗುತ್ತಿದ್ದು ಆಮಿಷದ ಕಾರ್ಯಚಟುವಟಿಕೆಯಲ್ಲಿ, ಭಯೋತ್ಪಾದನೆಯಲ್ಲಿ ಕಪ್ಪುಹಣದ ಪಾತ್ರ ಮಹತ್ತರವಾಗಿದೆ. ನೋಟು ಅಮಾನ್ಯೀಕರಣದ ಸಂದರ್ಭ ಹಣವನ್ನು ಬದಲಿಸುವ ಬದಲು ಈ ಯೋಜನೆಗೆ ಕಪ್ಪುಚುಕ್ಕೆ ಇಡಲು ಹೋದದ್ದು ನಮ್ಮ ಸಮಜದ ಭ್ರಷ್ಟ ಮನೋಸ್ಥಿಯಾಗಿದೆ. ಬ್ಯಾಂಕಿನ ಅಧಿಕಾರಿಯವರು ಮಾಡಬೇಕಾಗಿದ್ದ ಸೂಕ್ತ ಕೆಲಸ ಭ್ರಷ್ಟ ಹಾದಿ ಹಿಡಿದದ್ದು ನಮ್ಮ ಸಮಾಜದ ದುರಂತವಾಗಿದ್ದು ಯಾರ ಮನೆಯಲ್ಲಿ ಕಪ್ಪುಹಣವಿತ್ತೋ ಅದು ಬದಲಾಗಲಿಲ್ಲ ಎಂದು ಹೇಳಿದರು.
ಹೆಂಡದಂಗಡಿ ಸರ್ಕಾರದ್ದು
ಆಸ್ಪತ್ರೆ, ಶಿಕ್ಷಣ ಸಂಬಂಧಿ ಬೆಳವಣಿಗೆ ಖಾಸಗೀ ಆಡಳಿತದ ಪಾಲಾಗುತ್ತಿದ್ದು ಅಬಕಾರಿ ಇಲಾಖೆಗೆ ಸರ್ಕಾರ ಯಥೇಚ್ಛವಾದ ಉತ್ತೇಜನ ಕೊಡುತ್ತಿದೆ. ಸರ್ಕಾರ ಆಸ್ಪತ್ರೆ ಜಾಸ್ತಿ ಮಾಡಿದೆ, ಸ್ಕೂಲ್ ಜಾಸ್ತಿ ಮಾಡಿದೆ ಎಂಬ ವಿಚಾರವನ್ನು ನಾವು ಮಾಧ್ಯಮದಲ್ಲಿ ಕಾಣಲಾರೆವು. ನೌಕರನಿಗೆ ತಿಂಗಳು ಗಟ್ಟಲೆ ಸಂಬಳ ಕೊಡದೆ ದುಡಿಸುತ್ತೇವೆ, ಅದೇ ನೌಕರ ಸಂಬಳ ಸಿಗಲಿಲ್ಲವೆಂಬ ಹತಾಶೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಧನ ಕೊಡುತ್ತೇವೆ, ಬದುಕಲು ಬಿಡುವುದಿಲ್ಲ ತಿಥಿ ಚಂದ ಮಾಡ್ತೇವೆ ಎಂದು ವಿಡಂಬನೆಯ ನುಡಿಗಳನ್ನಾಡಿದರು.
ಓಡಾಡುವ ಜ್ಯುವೆಲ್ಲರಿ ಶಾಪ್
ಸಮಾಜದ ಯಾವುದೋ ಸಮಸ್ಯೆ ನಮ್ಮ ವೈಯಕ್ತಿಕ ಸಮಸ್ಯೆಯಾಗುತ್ತಾ ಹೋಗುತ್ತದೆ, ಇಂದಿನ ಸಮಾಜದಲ್ಲಿ ಪ್ರಾಮಾಣಿಕರನ್ನು ಕಳ್ಳ ಎಂದು ಹೇಳಿದರೆ ಬೇಸರವಾಗುವುದಿಲ್ಲ ಅದರ ಬದಲಾಗಿ ಕಳ್ಳನನ್ನು ಕಳ್ಳ ಎಂದು ಹೇಳಿದರೆ ಬೇಸರ ವ್ಯಕ್ತಪಡಿಸುತ್ತಾರೆ. ಹಣದ ದೊಂಬಿಯಿಂದಾಗಿ ವಿದ್ಯೆಯನ್ನು ಶಿಲುಬೆಗೇರಿಸಿದಂತಾಗಿದ್ದು ಭ್ರಷ್ಟತೆಯ ಪರಿಣಾಮವಾಗಿ ಎಲ್ಲೆಲ್ಲೂ ಓಡಾಡುವ ಜ್ಯುವೆಲ್ಲರಿ ಶಾಪ್ ಗೋಚರಿಸುತ್ತಿದೆ ಎಂದರು.
ಪ್ರಾಮಾಣಿಕ ನಿರ್ಧಾರ ತೆಗೆದುಕೊಳ್ಳೋಣ
ನಮ್ಮ ವೈಯಕ್ತಿಕ ಹಿತಾಸಕ್ತಿಯ ಸಲುವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಂದಿರಿಸಿದ್ದೇವೆ. ಇಂದು ಹಣ ಮಡದೇ ಇರುವುದು ದಡ್ಡತನವಾಗಿದ್ದು ಹಣ ಮಾಡಿ ಸಿಕ್ಕಿಹಾಕಿಕೊಳ್ಳದೇ ಇರುವುದು ಬುದ್ಧಿವಂತಿಕೆಯಾಗಿದೆ. ಸತ್ತಮೇಲೆ ಯಾರು ನಮ್ಮ ಮೇಲೆ ಹಾರ ಹಾಕ್ತಾರೋ ತಿಳಿಯದು, ಆದರೆ ಬದುಕಿರುವಾಗ ನಾವು ಆಶಿಸುವವರು ಹಾರ ಹಾಕಲಿ, ಅದು ಪ್ರಾಮಾಣಿಕವಾಗಿರಲಿ ಆ ನಿಟ್ಟಿನಲ್ಲಿ ನಾವು ಬೆಳೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ರಂಗಕರ್ಮಿ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ "ಅಭಿವೃದ್ಧಿ" ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು. ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಹರೀಶ್.ಟಿ.ಜಿ ವಂದಿಸಿದರು.