‘ಮುಸ್ಲಿಂ ಎಂಬ ಕಾರಣಕ್ಕೆ’ ಡಿವೈಎಫ್ಐ ಮುಖಂಡನ ಮೇಲೆ ಪೊಲೀಸರಿಂದ ದೌರ್ಜನ್ಯ: ಆರೋಪ
ಮಂಗಳೂರು, ಅ. 3: ಬೇಕರಿಯ ಬಾಗಿಲು ಮುಚ್ಚಿ ತನ್ನ ತಮ್ಮನೊಂದಿಗೆ ಬೈಕ್ನಲ್ಲಿ ಪತ್ನಿಯ ಮನೆಗೆ ತೆರಳುತ್ತಿದ್ದ ಡಿವೈಎಫ್ಐ ಮುಖಂಡನಿಗೆ ‘ಮುಸ್ಲಿಂ ಎಂಬ ಕಾರಣಕ್ಕೆ’ ಗಸ್ತಿನಲ್ಲಿದ್ದ ವೇಣೂರು ಪೊಲೀಸರು ದೌರ್ಜನ್ಯ ಎಸೆಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮೂಡುಬಿದಿರೆಯ ನಿವಾಸಿಗಳಾದ ರಿಯಾಝ್ ಮಾಂತೂರು (25), ಆವರ ಸಹೋದರ ಇರ್ಷಾದ್ (18) ಪೊಲೀಸರಿಂದ ದೌರ್ಜನ್ಯಕ್ಕೊಳಗಾದವರು.
ಹಲ್ಲೆಗೊಳಗಾದ ರಿಯಾಝ್ ಡಿವೈಎಫ್ಐನಲ್ಲಿ ಕ್ರಿಯಾಶೀಲರಾಗಿ ಸಮಾಜಸೇವೆಯಲ್ಲಿ ನಿರತರಾಗಿದ್ದವರು. ವಾರದ ಹಿಂದೆಯಷ್ಟೇ ಮದುವೆಯಾಗಿದ್ದ ರಿಯಾಝ್, ಮೂಡುಬಿದಿರೆ ಸಮೀಪದ ಗಂಜಿಮಠದಲ್ಲಿ ರಾತ್ರಿ ತನ್ನ ಬೇಕರಿ ಬಾಗಿಲು ಮುಚ್ಚಿ ಸಹೋದರನೊಂದಿಗೆ ಬೈಕ್ನಲ್ಲಿ ಬೆಳ್ತಂಗಡಿಯ ಕೆಳ್ತಜೆಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ವೇಣೂರು ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ರಿಯಾಝ್ ಚಲಾಯಿಸುತ್ತಿದ್ದ ಬೈಕ್ನ್ನು ಏಳೆಂಟು ಗಸ್ತು ಪೊಲೀಸರು ತಡೆದು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ರಿಯಾಝ್ನನ್ನು ಪೊಲೀಸರು ವಾಹನದ ದಾಖಲೆಗಳನ್ನು ತೋರಿಸಿಲು ಸೂಚಿಸಿದ್ದಾರೆ. ಈ ವೇಳೆ ರಿಯಾಝ್ ಡ್ರೈವಿಂಗ್ ಲೈಸನ್ಸ್ ನೀಡಿ, ವಾಹನದ ಉಳಿದ ದಾಖಲೆಗಳು ಮನೆಯಲ್ಲಿದ್ದು, ಬೆಳಗ್ಗೆ ತರುವುದಾಗಿ ಉತ್ತರಿಸಿದ್ದಾರೆ. ಈ ವೇಳೆ ರೀಯಾಝ್ಗೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ತಾರನಾಥ, ರಂಜಿತ್ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಡಿಎಲ್ನಲ್ಲಿದ್ದ ‘ರಿಯಾಝ್’ ಎಂಬ ಹೆಸರು ನೋಡಿ, ‘ಬ್ಯಾರಿ ನೀನು ಕಳ್ಳತನಕ್ಕೇ ಹೋಗುತ್ತಿದ್ದೀಯಾ? ಉಗ್ರಗಾಮಿ ತರ ಕಾಣುತ್ತೀರಾ’ ಎಂದು ನಿಂದಿಸಿದ್ದಾರೆ. ಈ ವೇಳೆ ರಿಯಾಝ್ ಸಹಜವಾಗಿಯೇ ಈ ನಿಂದನೆಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಪೊಲೀಸರು, ‘ಮುಸ್ಲಿಮನಿಗೆ ಇಷ್ಟು ಅಹಂಕಾರವಾ ?’ ಎಂದು ಮತ್ತೇ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಬೈಕ್ನ್ನು ಸ್ಟೇಷನ್ಗೆ ಒಯ್ಯುವುದಾಗಿ ಪೊಲೀಸರು ಹೇಳಿದರು. ಆಗ ರಿಯಾಝ್, ‘ಹಾಗಾದರೆ ಪೊಲೀಸ್ ವಾಹನದಲ್ಲೇ ನಮ್ಮನ್ನು ಬೆಳ್ತಂಗಡಿಗೆ ಬಿಟ್ಟುಬನ್ನಿ, ಬೆಳಗ್ಗೆ ವಾಹನದ ದಾಖಲೆ ನೀಡಿ ಬೈಕ್ನ್ನು ಪಡೆದುಕೊಳ್ಳುತ್ತೇವೆ’ ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭ, ಪೊಲೀಸರು ‘ಪೊಲೀಸ್ ಜೀಪ್ ನಿನ್ನ ಅಪ್ಪನದಾ ?’ ಎಂದು ಪ್ರಶ್ನಿಸಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ.
ಈ ಸಂದರ್ಭ ಅದೇ ದಾರಿಯಲ್ಲಿ ಖಾಸಗಿ ವಾಹನದಲ್ಲಿ ಕುಟುಂಬ ಸಮೇತ ತೆರಳುತ್ತಿದ್ದ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಪೊಲೀಸರಲ್ಲಿ ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ‘ಪೊಲೀಸರಿಗೇ ಎದುರು ಮಾತನಾಡುತ್ತಾರೆ’ ಎಂದು ಸಿಬ್ಬಂದಿ ದೂರಿದ್ದಾರೆ. ಈ ವೇಳೆ ಇನ್ಸ್ಪೆಕ್ಟರ್ ಅವರು, ‘ಒದ್ದು ಒಳಗೆ ಹಾಕಿ’ ಎಂದು ಆದೇಶಿಸಿದ್ದಾರೆ. ಬಳಿಕ ಪ್ರೇರೇಪಿತಗೊಂಡ ಪೊಲೀಸರು ಯುವಕರಿಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಾರ್ಗಮಧ್ಯೆಯೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಠಾಣೆಯಲ್ಲಿ ಸುಮಾರು 15-20 ಪೊಲೀಸರು ಲಾಕಪ್ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಕೊನೆಗೆ ಪೊಲೀಸರಿಗೇ ಹಲ್ಲೆ ನಡೆಸಿದ ಆರೋಪ ಹಾಗೂ ಬೈಕ್ನಲ್ಲಿ 2 ತಲವಾರು ಇದ್ದವು ಎಂದು ಆರೋಪ ಹೊರಿಸಿ ಕೇಸು ದಾಖಲಿಸುವಾಗಿ ಬೆದರಿಸಿದ್ದಾರೆ.
- ರಿಯಾಝ್ ಮಾಂತೂರು, ಪೊಲೀಸರಿಂದ ಹಲ್ಲೆಗೊಳಗಾದವರು.
ಸಂಪರ್ಕಕ್ಕೆ ಸಿಗದ ಪೊಲೀಸ್ ಅಧಿಕಾರಿಗಳು
ಘಟನೆಗೆ ಸಂಬಂಧಿಸಿದಂತೆ ಪತ್ರಿಕೆಯು ವೇಣೂರು ಎಸ್ಸೈ ನಾಗರಾಜ ಹಾಗೂ ಎಸ್ಪಿ ರವಿಕಾಂತೇ ಗೌಡರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಕ್ಕಿಲ್ಲ. ಪ್ರತಿಕ್ರಿಯೆ ಸಿಕ್ಕ ಕೂಡಲೇ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.