ಬ್ಯಾರಿ ಭಾಷೆಯ ಅಳಿವು-ಉಳಿವು ಬ್ಯಾರಿಗಳಲ್ಲೇ ಇದೆ: ಎಂ.ಬಿ.ಅಬ್ದುರ್ರಹ್ಮಾನ್
ಮಂಗಳೂರು, ಅ.3: ಜಗತ್ತಿನಲ್ಲೆಡೆ ಕಡಿಮೆ ಜನರು ಮಾತನಾಡುವ ಭಾಷೆಗಳು ಅಳಿವಿನ ಅಂಚಿನಲ್ಲಿವೆ ಎಂಬುದು ಭಾಷಾ ಅಧ್ಯಯನಕಾರರು ಎಚ್ಚರಿಸುತ್ತಲೇ ಇದ್ದಾರೆ. ಮಾತೃಭಾಷೆಯನ್ನು ಪ್ರೀತಿಸದೆ, ಗೌರವಿಸದೆ ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಇಂತಹ ಅಪಾಯಗಳು ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಬ್ಯಾರಿ ಭಾಷೆಯ ಅಳಿವು ಅಥವಾ ಉಳಿವು ಬ್ಯಾರಿಗಳ ಕೈಯಲ್ಲೇ ಇದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಪ್ರಥಮ ಅವಧಿಯ ಅಧ್ಯಕ್ಷ ಎಂ.ಬಿ. ಅಬ್ದುರ್ರಹ್ಮಾನ್ ಅಭಿಪ್ರಾಯಪಟ್ಟರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಬುಧವಾರ ನಗರದ ಪುರಭವನದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾರಿ ಅಕಾಡಮಿಗಾಗಿ ಕೂಗೆಬ್ಬಿಸಿದಾಗ ಅಕಾಡಮಿಯನ್ನು ಸರಕಾರ ಘೋಷಿಸಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಆದರೆ ಸರ್ವ ಬ್ಯಾರಿಗಳ ಹೋರಾಟದ ಫಲವಾಗಿ ಅಕಾಡಮಿ ಇಂದು ಉತ್ತಮವಾಗಿ ಕಾರ್ಯಾಚರಿಸುತ್ತಿದೆ. ಆದರೆ ಬ್ಯಾರಿ ಭಾಷೆಯ ಉಳಿವು ಅಥವಾ ಬೆಳವಣಿಗೆಯು ಕೇವಲ ಅಕಾಡಮಿಯಿಂದ ಮಾತ್ರ ಸಾಧ್ಯವಿಲ್ಲ. ಎಲ್ಲಾ ಬ್ಯಾರಿಗಳು ಮಾತೃಭಾಷೆಯನ್ನು ಗೌರವಿಸುತ್ತಾ ಮಾತುಗಾರಿಕೆ ಮತ್ತು ಸಾಹಿತ್ಯದ ಮೂಲಕ ಬ್ಯಾರಿ ಭಾಷೆಯನ್ನು ಉಳಿಸಬಹುದು. ಇಲ್ಲದಿದ್ದರೆ ಬ್ಯಾರಿ ಭಾಷೆಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಬ್ಯಾರಿ ಭಾಷೆಯ ಅಳಿವು ಅಥವಾ ಉಳಿವು ನಮ್ಮಲ್ಲೇ ಇದೆ ಎಂಬ ಪ್ರಜ್ಞೆ ಇರಬೇಕಿದೆ ಎಂದು ಎಂ.ಬಿ. ಅಬ್ದುರ್ರಹ್ಮಾನ್ ಹೇಳಿದರು.
ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ಆರ್.ಪಿ.ನಾಯ್ಕ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್, ಬಿ.ಎ.ಮುಹಮ್ಮದ್ ಹನೀಫ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ವಿವಿ ಬ್ಯಾರಿ ಅಧ್ಯಯನ ಪೀಠದ ಸಂಚಾಲಕ ಪ್ರೊ. ಅರಬಿ, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ದುಬೈಯ ಬ್ಯಾರೀಸ್ ಕಲ್ಚರಲ್ ಫೋರಂನ ಪೋಷಕ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಅಖಿಲ ಭಾರತ ಬ್ಯಾರಿ ಪರಿಷತ್ನ ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಕಾರ್ಯಾಧ್ಯಕ್ಷ ಅಬ್ದುನ್ನಾಸರ್ ಲಕ್ಕಿಸ್ಟಾರ್, ಅಧ್ಯಕ್ಷ ಜೆ. ಹುಸೈನ್, ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಿ.ಎಂ.ಅಸ್ಲಂ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಕೊಡಗು ಬ್ಯಾರಿ ವೆಲ್ಫೇರ್ ಟ್ರಸ್ಟ್ನ ಅಧ್ಯಕ್ಷ ಬಿ.ಎ.ಸಂಶುದ್ದೀನ್ ಮಡಿಕೇರಿ, ಕರ್ನಾಟಕ ಬ್ಯಾರಿ ಬ್ರಿಗೇಡ್ನ ಅಧ್ಯಕ್ಷ ಅನ್ವರ್ ರೀಕೊ, ಕರ್ನಾಟಕ ಬ್ಯಾರಿ ಸದ್ಭಾವನಾ ವೇದಿಕೆಯ ಅಧ್ಯಕ್ಷ ಅಝೀಝ್ ಹಕ್, ಮೇಲ್ತೆನೆಯ ಅಧ್ಯಕ್ಷ ಬಶೀರ್ ಅಹ್ಮದ್ ಕಿನ್ಯ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಕಾರ್ಪೊರೇಟರ್ ಲತೀಫ್ ಕಂದಕ್, ಎಂ.ಎನ್ ಅಬ್ದುರ್ರಹ್ಮಾನ್ ಮೂಡಿಗೆರೆ ಭಾಗವಹಿಸಿದ್ದರು.
ಕಾರ್ಯಕ್ರಮದ ಸದಸ್ಯ ಸಂಚಾಲಕ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ತನ್ಸೀಫ್ ಬಿ.ಎಂ. ವಂದಿಸಿದರು. ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ‘ಬ್ಯಾರಿ ಭಾಷೆ ಮತ್ತು ಸಾಹಿತ್ಯ ಇಂದು-ನಿನ್ನೆ-ನಾಳೆ’ ಎಂಬ ವಿಷಯದಲ್ಲಿ ಮಾತನಾಡಿದರು.
ಎಂ.ಜಿ.ರಹೀಂ ನಿರ್ದೇಶಿಸಿದ ಮುಹಮ್ಮದ್ ಬಡ್ಡೂರ್ ನಟಿಸಿದ ‘ಅಬ್ಬ’ ಬ್ಯಾರಿ ಚಲನಚಿತ್ರದ ಹಾಡಿನ ಸಿಡಿಯನ್ನು ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಬಿಡುಗಡೆಗೊಳಿಸಿದರು. ಬಳಿಕ ಈ ಚಿತ್ರದ ‘ಟ್ರೈಲರ್’ ಪ್ರದರ್ಶಿಸಲಾಯಿತು. ಅಬ್ದುಸ್ಸಮದ್ ಕಾಟಿಪಳ್ಳ ಬಳಗದ ಬ್ಯಾರಿ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.