ಸ್ಮಾರ್ಟ್ ರಸ್ತೆ ಬಳಿಕ ಝೀರೋ ಟ್ರಾಫಿಕ್: ಸಚಿವ ಖಾದರ್
'12 ಕೋಟಿ ರೂ. ವೆಚ್ಚದಲ್ಲಿ ಕದ್ರಿ ಪಾರ್ಕ್ ರಸ್ತೆ ಅಭಿವೃದ್ಧಿ'
ಮಂಗಳೂರು, ಅ.3: ನಗರದ ಕದ್ರಿ ಉದ್ಯಾನವನದ ಮುಂಭಾಗದ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡಲು 12 ಕೋಟಿ ಮೀಸಲಿಡಲಾಗಿದೆ. ಈ ರಸ್ತೆ ಸ್ಮಾರ್ಟ್ ರಸ್ತೆಯಾದ ಬಳಿಕ ಝೀರೊ ಟ್ರಾಫಿಕ್ ಆಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪ್ರವಾಸೋದ್ಯಮಕ್ಕೆ ಪೂರಕವಾಗಿ ಇಲ್ಲಿ ಸ್ಮಾರ್ಟ್ ಪೋಲ್, ಗುಡಿಸಲು ಮಾದರಿಯಲ್ಲಿ ಅಂಗಡಿಗಳ ನಿರ್ಮಾಣ ಮಾಡಲಾಗುವುದು. ಪ್ರವಾಸಿಗರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಪಂಪ್ವೆಲ್ ಬಳಿ ನೂತನ ಬಸ್ ನಿಲ್ದಾಣ ಮತ್ತು ಕೇಂದ್ರ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳನ್ನು ಪಿಪಿಪಿ ಮಾದರಿಯಲ್ಲಿ ಶೀಘ್ರವೇ ಕೈಗೆತ್ತಿಕೊಳ್ಳಲಾಗು ವುದು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾರ್ವಜನಿಕ ಹೂಡಿಕೆಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.
ಉರ್ವ ಮಾರ್ಕೆಟ್ ಬಳಿ ಕಬಡ್ಡಿ ಮತ್ತು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣಕ್ಕೆ ರೂ.10 ಕೋಟಿ ಮೀಸಲಿಡಲಾಗಿದೆ. ಕೂಳೂರಿನಲ್ಲಿ ನೂತನ ಸೇತುವೆ ನಿರ್ಮಾಣ ಕೆಲಸ ಶೀಘ್ರ ಆರಂಭವಾಗಲಿದ್ದು, ಈ ಸಂದರ್ಭ ಹಳೆ ಸೇತುವೆಯನ್ನು ಬಂದ್ ಮಾಡಿ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆಗೆ 30 ಕೋಟಿ ರೂ.
ಮಹಾಕಾಳಿಪಡ್ಪು ಬಳಿ ರೈಲ್ವೆ ಅಂಡರ್ಪಾಸ್ ನಿರ್ಮಾಣಕ್ಕೆ 30 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 10 ಕೋಟಿ ರೂ.ಗಳನ್ನು ಕಾಮಗಾರಿ ನಡೆಸಲು ರೈಲ್ವೇ ಇಲಾಖೆಗೆ ನೀಡಲಾಗುವುದು. ಉಳಿದ 20 ಕೋಟಿಯಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಭೂಸ್ವಾಧೀನ ಮತ್ತು ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಅ. 10ರಂದು ಸಭೆ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯಬೇಕಾದ ಕಾಮಗಾರಿಗಳು ಯಾವ ರೀತಿಯಲ್ಲಿ ನಡೆಯಬೇಕು ಎಂಬ ನೆಲೆಯಲ್ಲಿ ಸಮಗ್ರ ವಾಗಿ ಚರ್ಚಿಸುವ ಕುರಿತ ಸಭೆ ಅ.10ರಂದು ನಡೆಯಲಿದೆ. ಸಭೆಯಲ್ಲಿ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿ ದ್ದಾರೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.