ಪತ್ರಕರ್ತನಿಗೆ ಪತ್ರಕರ್ತರಿಂದಲೇ ಹಲ್ಲೆ; ಕೊಲೆ ಬೆದರಿಕೆ ಆರೋಪ
ಮಂಗಳೂರು, ಅ.3: ವೆಬ್ಸೈಟ್ವೊಂದರ ಪತ್ರಕರ್ತನಿಗೆ ಖಾಸಗಿ ವಾಹಿನಿಗಳ ಪತ್ರಕರ್ತರಿಂದಲೇ ಹಲ್ಲೆ ನಡೆದು, ಜೀವ ಬೆದರಿಕೆ ಒಡ್ಡಿದ ಘಟನೆ ನಗರದ ಕ್ಯಾಂಪ್ಕೊ ಕೇಂದ್ರದ ಬಳಿ ನಡೆದಿದೆ.
ಖಾಸಗಿ ವಾಹಿನಿಗಳ ಪತ್ರಕರ್ತರಾದ ಗಿರಿಧರ್ ಶೆಟ್ಟಿ, ಸುಖಪಾಲ್ ಹಲ್ಲೆ ನಡೆಸಿದ ಆರೋಪಿಗಳು. ವೆಬ್ಸೈಟ್ನ ಪತ್ರಕರ್ತ ರಂಜಿತ್ (25) ಹಲ್ಲೆಗೊಳಗಾದವರು.
ಸೆ.27ರಂದು ರಂಜಿತ್ ಅವರು ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಮಧ್ಯಾಹ್ನ 1 ಗಂಟೆಗೆ ಸ್ಕೂಟರ್ನಲ್ಲಿ ಕಟ್ಟಡದ ವರಾಂಡದಿಂದ ಹೊರಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ದೂರಲಾಗಿದೆ.
ಈ ವೇಳೆ ಖಾಸಗಿ ವಾಹಿನಿಗಳ ಪತ್ರಕರ್ತರಾದ ಗಿರಿಧರ್ ಶೆಟ್ಟಿ ಮತ್ತು ಸುಖಪಾಲ್ ಅವರು ರಂಜಿನ್ನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದ್ದು, ‘ನಿನ್ನ ವೆಬ್ಸೈಟ್ನಲ್ಲಿ ಭಾರೀ ವರದಿ ಮಾಡುತ್ತಿಯಾ’ ಎನ್ನುತ್ತಾ ಗಿರಿಧರ್ ಶೆಟ್ಟಿ ತನ್ನ ಕೈಯಲ್ಲಿದ್ದ ಬಾಕ್ಸ್ನಿಂದ ರಂಜಿತ್ ಅವರಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜೊತೆಯಲ್ಲಿದ್ದ ಸುಖಪಾಲ್ ಕೂಡ ಹಲ್ಲೆ ನಡೆಸಿ, ರಂಜಿತ್ ಧರಿಸಿದ್ದ ಹೆಲ್ಮೆಟ್ನ್ನು ಕಿತ್ತೆಸೆದಿದ್ದಾರೆ. ಬಳಿಕ ಗಿರಿಧರ್ ಶೆಟ್ಟಿ ಅವರು ರಂಜಿತ್ನನ್ನು ಆತನ ಸ್ಕೂಟರ್ ಸಮೇತ ನೆಲಕ್ಕೆ ದೂಡಿದ್ದಾರೆ. ಆನಂತರ ಆರೋಪಿಗಳಿಬ್ಬರೂ ರಂಜಿತ್ಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.