ಮಂಗಳೂರು: ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಸರಕಾರಿ ನೌಕರರಿಂದ ವಿನೂತನ ಸತ್ಯಾಗ್ರಹ
ಮಂಗಳೂರು, ಅ.3: ನಗರದ ಮಿನಿ ಪುರಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘ ಮಂಗಳೂರು ಘಟಕದ ವತಿಯಿಂದ ಹಳೆಯ ಪಿಂಚಣಿ ವ್ಯವಸ್ಥೆಗೆ ಒತ್ತಾಯಿಸಿ ‘ರಕ್ತದಾನ’ದ ಮೂಲಕ ವಿನೂತನ ಸತ್ಯಾಗ್ರಹ ನಡೆಯಿತು.
ಸಂಘದ ಪದಾಧಿಕಾರಿಗಳು, ಸದಸ್ಯರು ರಕ್ತದಾನ ಮಾಡಿ ಬಳಿಕ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ.ಪಿ. ದಯಾನಂದ ಪೈ - ಪಿ. ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಾಜಶೇಖರ್ ಹೆಬ್ಬಾರ್, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾದರೆ ಸರಕಾರ ಎಚ್ಚೆತ್ತುಕೊಳ್ಳುವವರೆಗೆ ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.
ನಮ್ಮ ಸಂಸದರು, ಶಾಸಕರಿಗೆ ಸವಲತ್ತು ಬೇಕಾದರೆ ಅಧಿವೇಶನದಲ್ಲಿ ನಿಂತು ಮಾತನಾಡಿದ ಕೂಡಲೇ ಸಿಗುತ್ತದೆ. ಆದರೆ ಸರಕಾರಿ ನೌಕರರು ಸವಲತ್ತಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗುವವರೆಗೆ ಹೋರಾಟ ನಡೆಬೇಕು ಎಂದು ಅವರು ಹೇಳಿದರು.
2006ರ ಏಪ್ರಿಲ್ 1ರಿಂದ ಜಾರಿಗೆ ಬಂದ ಎನ್ಪಿಎಸ್ ಯೋಜನೆ ಸರಕಾರಿ ನೌಕರರ ಪಿಂಚಣಿ ವ್ಯವಸ್ಥೆಗೆ ಮಾರಕವಾಗಿದೆ. ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎನ್ಪಿಎಸ್ ಮೂಲಕ ಪಿಂಚಣಿಯ ಹಣವನ್ನು ಶೇರು ಮಾರುಕಟ್ಟೆಗೆ ಹಾಕುವ ಮೂಲಕ ನೌಕರರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಕಳೆದ ಒಂದೂವರೆ ತಿಂಗಳಲ್ಲಿ ಶೇರು ಮಾರುಕಟ್ಟೆಯಲ್ಲಿ ಭರ್ತಿ 13 ಸಾವಿರ ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಇದೇ ರೀತಿ ಪಿಂಚಣಿ ಹಣವನ್ನು ಶೇರು ಮಾರ್ಕೆಟ್ಗೆ ಹಾಕಿದರೆ ಮುಂದೆ ಯಾವ ರೀತಿಯಲ್ಲಿ ನಿಂತು ಬಿಡುತ್ತದೆ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಈ ಎನ್ಪಿಎಸ್ ಯೋಜನೆಯ ಕುರಿತು ಸಾಧಕ- ಬಾಧಕಗಳು ಚರ್ಚೆಯಾಗಬೇಕು ಎಂದವರು ಹೇಳಿದರು.
ಈ ಸಂದರ್ಭ ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವ ಪ್ರೊ. ಎ.ಎಂ.ನರಹರಿ ಮಾತನಾಡಿ, ಪಿಂಚಣಿ ಎನ್ನುವುದು ನಮ್ಮ ಹಕ್ಕು. ಪ್ರಪಂಚದ ಯಾವುದೇ ದೇಶವಾಗಲೀ ಅಲ್ಲಿ ದುಡಿಯುವ ನೌಕರರಿಗೆ ಪಿಂಚಣಿ ವ್ಯವಸ್ಥೆಯಿದೆ ಎಂದು ಅವರು ಹೇಳಿದರು. ಸರಕಾರದ ಬಳಿಯಲ್ಲಿ ಎಂದಿಗೂ ಹಣ ಇರುವುದಿಲ್ಲ. ಪ್ರತಿ ವರ್ಷ ನಡೆಯುವ ಹಣಕಾಸಿನ ಮುಂಗಡ ಪತ್ರ ಮಂಡನೆಯಲ್ಲಿ ಕೂಡ ಅವರು ಹಣಕಾಸಿನ ಕೊರತೆಯಿದೆ ಎಂದೇ ಹೇಳುತ್ತಾ ಬರುತ್ತಾರೆ. ನಿಜವಾಗಿಯೂ ಇದೊಂದು ಸಂಪನ್ಮೂಲ ಕ್ರೋಡೀಕರಣಕ್ಕೆ ಅವಕಾಶ ಜತೆಗೆ ಸರಕಾರಕ್ಕೂ ಇದೊಂದು ಅಸ. ಈ ಕಾರಣದಿಂದ ಹೋರಾಟಗಾರರು ವ್ಯವಸ್ಥಿತವಾಗಿ ಶಿಸ್ತಿನಿಂದ ಮುಂದೆ ಸಾಗುತ್ತಾ ಸಂಪೂರ್ಣವಾಗಿ ಹೋರಾಟದಲ್ಲಿ ಭಾಗಿಗಳಾಗಬೇಕು ಎಂದು ಕರೆ ನೀಡಿದರು.
ನ್ಪಿಎಸ್ನಲ್ಲಿ ನೌಕರರ ಹಣ ಕೂಡುವುದಕ್ಕೆ ಬದಲಾಗಿ ಸರಕಾರವೇ ನೇರವಾಗಿ ಹೂಡಿಕೆ ಮಾಡಲಿ. ಪಿಂಚಣಿ ವ್ಯವಸ್ಥೆಯ ಕುರಿತು ಸುಪ್ರೀಂ ಕೋರ್ಟ್ ಯಾವ ರೀತಿಯ ನಿರ್ದೇಶನ ನೀಡಿದೆಯೋ ಅದೇ ಮಾದರಿಯಲ್ಲಿ ನೀಡಲಿ, ಆದರೆ ಎನ್ಪಿಎಸ್ ಮೂಲಕ ನೌಕರರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರು.
ಈ ಸಂದರ್ಭ ಕರ್ನಾಟಕ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರನಾಥ್ ಎಂ., ಕಾರ್ಯದರ್ಶಿ ಶರತ್ ಬಂಗೇರಾ, ಮೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಎಚ್.ಎಸ್. ಗುರುಮೂರ್ತಿ, ಎಜೆ ಆಸ್ಪತ್ರೆಯ ಡಾ. ಅರವಿಂದ್, ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಸರಕಾರಿ ನೌಕರರು ತಮ್ಮ ರಕ್ತವನ್ನು ನೀಡುವ ಮೂಲಕ ಸತ್ಯಾಗ್ರಹ ಹೋರಾಟದಲ್ಲಿ ಭಾಗಿಗಳಾದರು. ನಗರದ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿಗಳು ರಕ್ತದಾನ ಪ್ರಕ್ರಿಯೆ ನಡೆಸಿಕೊಟ್ಟರು.