ಪುಸ್ತಕ ಓದಿನ ಕಡೆ ಮರಳುವುದು ಅಗತ್ಯ: ಕು.ಗೋ.
ಉಡುಪಿ, ಅ.3: ಮೊಬೈಲ್, ಇಂಟರ್ನೆಟ್ಗಳಲ್ಲಿರುವ ಮುಳುಗಿರುವ ಯುವ ಜನತೆ ಮತ್ತೆ ಪುಸ್ತಕ ಓದಿನ ಕಡೆ ಮರಳಬೇಕಾದ ಅಗತ್ಯವಿದೆ ಎಂದು ಎಂದು ಹಿರಿಯ ಸಾಹಿತಿ ಎಚ್.ಗೋಪಾಲ ಭಟ್(ಕು.ಗೋ) ಹೇಳಿದ್ದಾರೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಉಡುಪಿ ಎಂಜಿಎಂ ಕಾಲೇಜು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಮಾತೇಕತೆ -2’ ಹಿರಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿ ದ್ದರು.
ಯಾರನ್ನು ಧ್ವೇಷಿಸದೆ ಎಲ್ಲರನ್ನೂ ಪ್ರೀತಿಸಿ. ಲಕ್ಷ ಪುಸ್ತಕಗಳನ್ನು ಓದುವ ಆಸಕ್ತಿ ಇರುವವರಿಗೆ ಹಂಚಿದ್ದೇನೆ. ಇದರಲ್ಲಿ ನನಗೆ ಸಾಕಷ್ಟು ತೃಪ್ತಿ, ಪ್ರೀತಿ ದೊರೆತಿದೆ. ವಿದ್ಯಾರ್ಥಿಗಳು ಪ್ರತಿಕ್ಷಣವೂ ಚಟುವಟಿಕೆಯಿಂದ ಇರಬೇಕು. ನಮ್ಮಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪುಸ್ತಕ ಓದುವುದೇ ದೊಡ್ಡ ಚಿಕಿತ್ಸೆಯಾಗಿದೆ. ಓದಿನಿಂದ ಸಿಗುವ ಆನಂದ ಎಲ್ಲೂ ಸಿಗಲ್ಲ. ನೆಮ್ಮದಿ ಸುಖ ಸಿಗುವುದು ಕೇವಲ ಓದಿನಿಂದ ಮಾತ್ರ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಮಾತನಾಡಿ, ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಇಲ್ಲದೆ ಬದುಕಲು ಸಾಧ್ಯವಿಲ್ಲ. ಕಲೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಿವೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು. ಮೂಲ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಸಾಹಿತಿಗಳ ಮೇಲೆ ಇದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವಿಶ್ವನಾಥ ಶೆಣೈ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬೊಮ್ಮರಬೆಟ್ಟು ಎ.ನರಸಿಂಹ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಅಂಶುಮಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ ದರು. ಉಪನ್ಯಾಸಕ ಸುಚಿತ್ ಕೊೀಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.