ಮಣಿಪಾಲ: ಅ.7ರಂದು ಸಂಭ್ರಮ ಕಿರುಚಿತ್ರ ಸ್ಪರ್ಧೆ, ಪ್ರಶಸ್ತಿ ವಿತರಣೆ
ಉಡುಪಿ, ಅ.3: ಉಡುಪಿಯ ಸಂಭ್ರಮ ಕಲ್ಚರಲ್ ಟ್ರಸ್ಟ್ ಆಯೋಜಿಸಿದ ಕಿರುಚಿತ್ರಗಳ ಸ್ಪರ್ಧೆ 2018ರ ಪ್ರಶಸ್ತಿ ವಿತರಣಾ ಸಮಾರಂಭ ಅ.7ರ ರವಿವಾರ ಅಪರಾಹ್ನ 2 ರಿಂದ ರಾತ್ರಿ 9 ಗಂಟೆಯವರೆಗೆ ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಭ್ರಮ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷ ಸಂದೀಪ್ ಕಾಮತ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರುಈ ಬಾರಿಯ ಪ್ರಶಸ್ತಿ ವಿತರಣಾ ಸಮಾರಂಭವನ್ನು ವಿಶಿಷ್ಟರೀತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತುಳು ಚಿತ್ರಗಳ ನಟ,ನಟಿಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರಪ್ರೇಮಿಗಳು ಭಾಗವಹಿಸಲಿದ್ದಾರೆ. ನಟ-ನಟಿಯರಾದ ರಕ್ಷಿತ್ ಶೆಟ್ಟಿ, ಅರವಿಂದ ಬೋಳಾರ್, ಅರ್ಜುನ್ ಕಾಪಿಕಾಡ್, ಪ್ರಕಾಶ್ ಶೆಟ್ಟಿ, ರಾಧಿಕಾ ರಾವ್, ಶ್ರೇಯಾ ಆಂಚನ್ ಸೇರಿದಂತೆ 25ಕ್ಕೂ ಅದಿಕ ಮಂದಿ ಭಾಗವಹಿಸಲಿದ್ದಾರೆ.
ಅಲ್ಲದೇ ಕನ್ನಡ ಮತ್ತು ತುಳು ಚಿತ್ರರಂಗದ ವಿವಿಧ ಚಿತ್ರತಂಡಗಳು ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ನೀಡಲಿವೆ. ಬಾಯೋ ಕೊಂಕಣಿ ಚಿತ್ರತಂಡ, ಗಂಟ್ ಕಲ್ವೇರ್, ದೇಯಿ ಬೈದೆತಿ, ಭಟ್ರೆನ್ ಮಗಲ್, ಬಲಿಪೆ, ಗೋಲ್ಮಾಲ್ ಮುಂತಾದ ತುಳು ಚಿತ್ರ ತಂಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ ಚಿತ್ರ ತಂಡ ಸಹ ಪಾಲ್ಗೊಳ್ಳಲಿವೆ ಎಂದರು.
ಕಾರ್ಯಕ್ರಮದಲ್ಲಿ ಉದಯ ಟಿವಿಯ ಭರ್ಜರಿ ಕಾಮಿಡಿ ಖ್ಯಾತಿಯ ಮಿಮಿಕ್ರಿ ಗೋಪಿ, ಕಾಪುವಿನ ಗ್ರಾವಿಟಿ ಡ್ಯಾನ್ಸ್ ಗ್ರೂಪ್, ಅಶೋಕ್ ಪೊಳಲಿ ಅವರ ವೈವಿಧ್ಯಮಯ ಡ್ಯಾನ್ಸ್, ವಿಶ್ವಾಸ್ ಗುರುಪುರ, ದಿವ್ಯಾ ರಾಮಚಂದ್ರಿಂದ ಗಾಯನ, ಬಹುಮಾನ ವಿತರಣೆ ಮುಂತಾದವು ನಡೆಯಲಿವೆ ಎಂದವರು ವಿವರಿಸಿದರು.
ಒಟ್ಟು 47 ಕಿರುಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು. ಕನ್ನಡ ಚಿತ್ರರಂಗದ ಹಿರಿಯ ನಟ ದಯಾನಂದ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಹಾಜಿ ಕೆ.ಅಬೂಬಕರ್, ಯೋಧರಾದ ನಾರಾಯಣ ಕಾಮತ್, ರಾಜೇಶ್ ಪ್ರಭು ಇವರಿಗೆ ಸನ್ಮಾನವೂ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು, ಪ್ರಕಾಶ್ ಸುವರ್ಣ, ಸುಹಾಸ್ ಶೆಣೈ, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.