ಪುತ್ತೂರು ನಗರಸಭೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಂಡಿಲ್ಲ: ಇಬ್ರಾಹಿಂ ಗೋಳಿಕಟ್ಟೆ
ಪುತ್ತೂರು, ಅ. 3: ಪುತ್ತೂರು ಪುರಸಭೆ ನಗರಸಭೆಯಾಗಿ ಪರಿವರ್ತನೆಯಾದ ಬಳಿಕದ 5 ವರ್ಷದ ಅವಧಿಯಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಬಡವರಿಗೆ ಒಂದೇ ಒಂದು ಮನೆ ನಿವೇಶನ ಹಂಚಿಕೆ ಮಾಡುವ ಕೆಲಸ ನಡೆದಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 2845 ಮಂದಿ ಬಡವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ ಎಂದು ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಅವರು ಆರೋಪಿಸಿದರು.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರು ನಗರಸಭೆಯ ವ್ಯಾಪ್ತಿಯ ಬಲ್ನಾಡಿನಲ್ಲಿ 15.5ಎಕ್ರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಕಂದಾಯ ಇಲಾಖೆ ಪಹಣಿಪತ್ರ ತಯಾರಿಸಿದ್ದರೂ, ನಗರಸಭೆಯ ಅಧಿಕಾರಿಗಳು ಈ ಜಾಗವನ್ನು ಸಮತಟ್ಟುಗೊಳಿಸಲು ಖರ್ಚುವೆಚ್ಚ ತಗಲುತ್ತದೆ ಎಂಬ ಕಾರಣ ನೀಡಿ ಹಸ್ತಾಂತರಿಸಿಕೊಳ್ಳಲು ಮುಂದಾಗುತ್ತಿಲ್ಲ. ಬದಲಾಗಿ ನಿವೇಶನ ಮಂಜೂರಾತಿಗೆ ಭೂಮಿ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ನಿವೇಶನ ಹಂಚಿಕೆ ವಿಚಾರದಲ್ಲಿ ಜನಪ್ರತಿನಿಧಿಗಳು ಕೂಡ ಮುತುವರ್ಜಿ ವಹಿಸಿಲ್ಲ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಾಗಿ ನಿವೇಶನ ರಹಿತ ಬಡವರು ಸಲ್ಲಿಸಿರುವ ಅರ್ಜಿಗಳು ನಗರಸಭೆಯ ಕಚೇರಿಯಲ್ಲಿ ರಾಶಿ ಬೀಳುವಂತಾಗಿದೆ ಎಂದು ದೂರಿದರು.
ಈ ನಡುವೆ ಮಧ್ಯವರ್ತಿಗಳು 1.5 ಸೆಂಟ್ಸ್ ನಿವೇಶನ ನೀಡುವುದಾಗಿ ಭರವಸೆ ನೀಡಿ ಅರ್ಜಿ ಸಲ್ಲಿಸಿದ ಬಡವರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಅರ್ಜಿ ಹೆಸರಿನಲ್ಲಿ ಬಡವರಿಂದ ಹಣ ವಸೂಲಿ ಮಾಡುವ ಮಧ್ಯವರ್ತಿಗಳ ಕೃತ್ಯದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಭೂಮಿಯನ್ನು ನಗರಸಭೆಗೆ ಹಸ್ತಾಂತರಿಸಿ ಬಡವರಿಗೆ ನಿವೇಶನ ಹಂಚುವ ಕೆಲಸವನ್ನು ಕಂದಾಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳು ಜಂಟಿಯಾಗಿ ಮಾಡಬೇಕು ಎಂದು ಆಗ್ರಹಿಸಿದ ಅವರು ನಗರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಇರುವ ಸರ್ಕಾರಿ ಭೂಮಿಯನ್ನು ಸಮತಟ್ಟುಗೊಳಿಸಲು ಅನುದಾನ ಒದಗಿಸುವಂತೆ ಮುಖ್ಯ ಮಂತ್ರಿಗೆ ಮನವಿ ಸಲ್ಲಸಿ, ನಿವೇಶನ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಾಧ್ಯಕ್ಷ ಯುನಿಕ್ ಅಬ್ದುಲ್ ರಹಿಮಾನ್, ಕ್ಷೇತ್ರ ಸಮಿತಿ ಕಾರ್ಯದರ್ಶಿ ಬಿ.ಎಲ್.ಚಂದ್ರಶೇಖರ್ ಅಂಚನ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಇಬ್ರಾಹಿಂ ಪರ್ಪುಂಜ, ನಗರ ಸಮಿತಿಯ ಅಧ್ಯಕ್ಷ ವಿಕ್ಟರ್ ಗೋನ್ಸಾಲ್ವೀಸ್ ಬನ್ನೂರು, ಮುಖಂಡ ಸುಂದರ ಬಪ್ಪಳಿಗೆ ಉಪಸ್ಥಿತರಿದ್ದರು.