ವಕ್ಫ್ ಸೊತ್ತುಗಳ ಸಂರಕ್ಷಣೆಗೆ ಸರ್ವ ಕ್ರಮ: ಸಚಿವ ಝಮೀರ್
ಸುಳ್ಯದಲ್ಲಿ ಮುತವಲ್ಲಿ ಸಮಾವೇಶ, ವಕ್ಫ್ ಸಚಿವರಿಗೆ ಸನ್ಮಾನ
ಸುಳ್ಯ, ಅ. 3: ವಕ್ಫ್ ಸೊತ್ತುಗಳ ಸಂರಕ್ಷಣೆಗೆ ಸರ್ವ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೇ ಹಣ ಬಿಡುಗಡೆಗೊಳಿಸಲಾಗುತ್ತದೆ. ಆದ್ಯತೆಯ ಮೇರೆಗೆ ನಗರ ಪ್ರದೇಶವನ್ನು ಆಯ್ಕೆ ಮಾಡಲಾಗುವುದು. ದಫನ ಭೂಮಿ ಸೇರಿದಂತೆ ಎಲ್ಲಾ ವಕ್ಫ್ ಸ್ವತ್ತುಗಳನ್ನು ಸಂರಕ್ಷಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ಹೇಳಿದರು.
ಸುಳ್ಯ ಅನ್ಸಾರಿಯಾ ಅನಾಥಾಲಯ ಆಶ್ರಯದಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ವಕ್ಫ್ ಸಂಸ್ಥೆಗಳ ಮುತವಲ್ಲಿ ಸಮಾವೇಶ, ಮಾಹಿತಿ ಕಾರ್ಯಾಗಾರ ಹಾಗೂ ಸಚಿವರಿಗೆ ಸಾರ್ವಜನಿಕ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಎಲ್ಲಾ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ದು ಪಾರದರ್ಶಕವಾಗಿ ವಿತರಿಸುವುದು ಇಲಾಖೆಯ ಗುರಿ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಕಣಚೂರ್ ಮೋನ್ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಟಿ.ಎಂ. ಶಹೀದ್, ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಉಸ್ಮಾನ್, ಜಿಲ್ಲಾ ವಕ್ಫ್ ಅಧಿಕಾರು ಅಬೂಬಕ್ಕರ್, ಜಿಲ್ಲಾ ನಿಗಮ ಅಧಿಕಾರಿ ಬಂಡಾರಿ, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್. ಸಂಶುದ್ದೀನ್, ಅನ್ಸಾರಿಯಾ ಯತೀಂಖಾನ ಅನಾಥಾಲಯ ಅಧ್ಯಕ್ಷ ಅಬ್ದುಲ್ ಮಜೀದ್, ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ, ಗಾಂಧಿನಗರ ಜುಮ್ಮಾ ಮಸೀದಿ ಉಪಾಧ್ಯಕ್ಷ ಆದಂ ಹಾಜಿ ಕಮ್ಮಾಡಿ, ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ವಕ್ಫ್ ಸಂಸ್ಥೆಗಳ ಪ್ರತಿನಿಧಿಗಳಾದ ಇಕ್ಬಾಲ್ ಬೆಳ್ಳಾರೆ, ಮಹಮ್ಮದ್ ಹಾಜಿ ಬೆಳ್ಳಾರೆ, ಅಬ್ದುರ್ರೆಹಮಾನ್ ಹಾಜಿ ಅರಿಯಡ್ಕ, ಕೆಪೆಕ್ ಮಾಜಿ ನಿರ್ದೇಶಕ ಪಿ.ಎ. ಮಹಮ್ಮದ್, ಯತೀಂಖಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಮುಖಂಡರುಗಳಾದ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ನೂರುದ್ದೀನ್ ಸಾಲ್ಮರ, ಶರೀಫ್ ಕಂಟಿ, ಸಿದ್ಧೀಕ್ ನಾವೂರು, ಆರ್.ಕೆ. ಮಹಮ್ಮದ್, ಶಾಫಿ ಕುತ್ತಮೊಟ್ಟೆ, ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ವಕ್ಫ್ ಸದಸ್ಯ ಕೆ.ಎಂ. ಮುಸ್ತಫ ಸ್ವಾಗತಿಸಿ, ವ್ಯವಸ್ಥಾಪಕ ಓವೈಸ್ ವಂದಿಸಿದರು.