ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ
ಬಂಟ್ವಾಳ, ಅ. 4: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊನೆಗೂ ಜಿಲ್ಲಾ ಆರೋಗ್ಯ ಅಧಿಕಾರಿ ವೈದ್ಯರೊಬ್ಬರನ್ನು ನೇಮಿಸಿದ್ದಾರೆ.
ಸೋಮವಾರ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕತ್ಯವ್ಯಕ್ಕೆ ಹಾಜರಾಗಿದ್ದ ಡಾ. ರೋಹಿಣಿ ಅವರನ್ನು ಎಸ್ಡಿಪಿಐ ಮಂಚಿ ವಲಯ ಸಮಿತಿ ಸದಸ್ಯರು ಹೂಗುಚ್ಛ ನೀಡಿ ಸ್ವಾಗತಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ಸುಮಾರು ಒಂದುವರೆ ತಿಂಗಳಿನಿಂದ ಎದುರಿಸುತ್ತಿರುವ ವೈದ್ಯ-ಸಿಬ್ಬಂದಿಯ ಕೊರತೆಯ ಬಗ್ಗೆ ಎಸ್ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಅವರಿಗೆ ಮನವಿ ಮೂಲಕ ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಎರಡು ವಾರದೊಳಗೆ ವೈದ್ಯರನ್ನು ನೇಮಿಸುವಂತೆ ಭರವಸೆ ನೀಡಿದ್ದು, ಇದೀಗ ವೈದ್ಯರನ್ನು ನೇಮಕ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ವೈದ್ಯ-ಸಿಬ್ಬಂದಿಯ ಕೊರತೆಯ ಬಗ್ಗೆ ವಿಶೇಷ ಸುದ್ದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಕಣ್ತೆರಿಸಿದ "ವಾರ್ತಾಭಾರತಿ" ಪತ್ರಿಕೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಫೈಝಲ್ ಮಂಚಿ ಅವರು ತಿಳಿಸಿದ್ದಾರೆ.
ವೈದ್ಯರ ಕೊರತೆಯ ಬಗ್ಗೆ ವರದಿ ಪ್ರಕಟಿಸಿತ್ತು
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಚಿ, ಇರಾ, ಕೊಳ್ನಾಡು, ಸುರಿಬೈಲು, ಸಾಲೆತ್ತೂರು ಹಾಗೂ ಕುಲಾಯಿ ಗ್ರಾಮಗಳ ಜನರಿಗೆ ಈ ಆರೋಗ್ಯ ಕೇಂದ್ರವೇ ಆಧಾರವಾಗಿದ್ದು, ಸುಮಾರು 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಆರೋಗ್ಯ ಕೇಂದ್ರ ದಿನಕ್ಕೆ 140ಕ್ಕೂ ಅಧಿಕ ರೋಗಿಗಳು ಸಂದರ್ಶನ ಮಾಡುತ್ತಿದ್ದು, ಇದೀಗ ಮುಖ್ಯ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಕೊರತೆಯಿಂದ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಇಳಿಮುಖವಾಗಿತ್ತು. ಈ ಬಗ್ಗೆ "ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು-ಸಿಬ್ಬಂದಿಯ ಕೊರತೆ'' ಎಂಬ ಶೀರ್ಷಿಕೆಯಡಿ ಸೆ. 9ರಂದು ವಿಶೇಷ ವರದಿಯನ್ನು ಪ್ರಕಟಿಸುವ ಮೂಲಕ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿತ್ತು.