ಬ್ರಹ್ಮರಕೂಟ್ಲು: ಟೋಲ್ ನೀಡದ ಆರೋಪ; ಕಾರಿನ ಗಾಜು ಒಡೆದ ಸಿಬ್ಬಂದಿ
ಮಹಿಳೆಗೆ ಗಾಯ
ಬಂಟ್ವಾಳ, ಅ. 4: ಟೋಲ್ ನೀಡಿಲ್ಲ ಎಂಬ ಆರೋಪದ ಮೇರೆಗೆ ಸಿಬ್ಬಂದಿಯೋರ್ವ ವಾಹನವನ್ನು ಅಡ್ಡಗಟ್ಟಿ ಕಾರಿನ ಮುಂಭಾಗದ ಗಾಜನ್ನು ಪುಡಿಗೈದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬ್ರಹ್ಮರಕೂಟ್ಲು-ತಲಪಾಡಿ ಟೋಲ್ಗೇಟ್ನಲ್ಲಿ ಗುರುವಾರ ನಡೆದಿದೆ.
ವಳಚ್ಚಿಲ್ ನಿವಾಸಿ ತಾಝಿಯಾ (21) ಗಾಯಗೊಂಡ ಮಹಿಳೆ.
ಘಟನೆಯಿಂದ ತಾಝಿಯಾ ಅವರ ಕಣ್ಣಿಗೆ ಗಾಯವಾಗಿದೆ. ಗಾಯಾಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಸಂಜೆ ಸದಖತ್ ಎಂಬವರು ತನ್ನ ಕುಟುಂಬದವರೊಂದಿಗೆ ಕಾರಿನಲ್ಲಿ ಬಿ.ಸಿ.ರೋಡಿನ ಸಜಿಪದಿಂದ ವಳಚ್ಚಿಲ್ ಕಡೆಗೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಈ ಸಂದರ್ಭ ಕಾರು ಬ್ರಹ್ಮರಕೂಟ್ಲು-ತಲಪಾಡಿ ಟೋಲ್ಗೇಟ್ ತಲುಪುತ್ತಿದ್ದಂತೆ, ಟೋಲ್ ಸಿಬ್ಬಂದಿ ವಾಹನವನ್ನು ಅಡ್ಡಗಟ್ಟಿ ಟೋಲ್ ಕೊಡುವುದಿಲ್ಲವೇ ಎಂದು ಹೇಳಿ ಕಾರಿನ ಮುಂಭಾಗದ ಗಾಜನ್ನು ಪುಡಿಗೈದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ಅವರ ಪತ್ನಿ ತಾಝಿಯಾ ಅವರ ಕಣ್ಣಿಗೆ ಗಾಜು ತಗಲಿದ್ದು, ಗಾಯಗಳಾಗಿವೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.