ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಭೀತಿ: ಮೀನುಗಾರರಿಗೆ ಎಚ್ಚರಿಕೆ
ಅರಬಿಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ
ಉಡುಪಿ, ಅ.4: ಅರಬಿ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ಇದರಿಂದ ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಲಿದೆ. ವೇಗದ ಗಾಳಿ-ಮಳೆ ಬೀಸಲಿದೆ. ಈ ವೇಳೆ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಅ.10ರವರೆಗೆ ಮೀನುಗಾರಿಕೆಗಾಗಿ ಯಾರೂ ಸಮುದ್ರಕ್ಕೆ ಇಳಿಯದಂತೆ ಹಾಗೂ ಈಗಾಗಲೇ ತೆರಳಿದವರು ಕೂಡಲೇ ಹಿಂದಿರುಗುವಂತೆ ಹವಾಮಾನ ಇಲಾಖೆ ಸೂಚನೆ ನೀಡಿರುವುದಾಗಿ ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಪಾರ್ಶ್ವನಾಥ್ ತಿಳಿಸಿದ್ದಾರೆ.
ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ನಿನ್ನೆಯಿಂದಲೇ ಮಲ್ಪೆ ಬಂದರಿನಲ್ಲಿ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗುತ್ತಿದೆ.
ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ತೆರಳಿರುವ ಎಲ್ಲಾ ಮೀನುಗಾರರು ಅ.5ರ ರಾತ್ರಿಯೊಳಗೆ ಮಲ್ಪೆ ಬಂದರಿಗೆ ಮರಳುವಂತೆ ಧ್ವನಿವರ್ದಕದ ಮೂಲಕ ನಿನ್ನೆ ಮತ್ತು ಇಂದು ದಿನವಿಡೀ ಸೂಚನೆಗಳನ್ನು ನೀಡಲಾಗಿದೆ ಎಂದವರು ತಿಳಿಸಿದರು.
ಚಂಡಮಾರುತದ ಪರಿಣಾಮಗಳು ಅ.8ರಿಂದ 10ರವರೆಗೆ ಇರಲಿವೆ. ಈ ವೇಳೆ ಸಮುದ್ರ ಪ್ರಕ್ಷುಬ್ಧವಾಗಲಿದ್ದು, ಭಾರೀ ಗಾತ್ರದ ಅಲೆಗಳು ಏಳಲಿವೆ. ಇದರಿಂದ ಕೇರಳ, ಪಶ್ಚಿಮ ಕರಾವಳಿ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಈಗಾಗಲೇ ದಡಕ್ಕೆ ಬಂದಿರುವ ಮೀನುಗಾರಿಕಾ ದೋಣಿಗಳಿಗೆ ಅ.10ರವರೆಗೆ ಮತ್ತೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಸಮುದ್ರ ಮಧ್ಯದಲ್ಲಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ನಿರತವಾಗಿರುವ ಬೋಟು ಗಳಿಗೂ ಸೂಚನೆಗಳನ್ನು ರವಾನಿಸಲಾಗುತ್ತಿದೆ. ಅ.5-6ರೊಳಗೆ ಎಲ್ಲರೂ ಬಂದರಿಗೆ ಮರಳುವಂತೆ ತಿಳಿಸಲಾಗುತ್ತಿದೆ ಎಂದು ಪಾರ್ಶ್ವನಾಥ್ ನುಡಿದರು.
ಶೇ.80ರಷ್ಟು ಬೋಟು ವಾಪಾಸು
ಪಶ್ಚಿಮ ಕರಾವಳಿಯಲ್ಲಿ ಹವಾಮಾನ ವೈಫರಿತ್ಯದ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಇಲಾಖೆ ಎರಡು ದಿನಗಳ ಹಿಂದೆ ನಮಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ನಾವು ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಸಂದೇಶವನ್ನು ರವಾನಿಸುತಿದ್ದೇವೆ. ಬಂದರಿನಲ್ಲೂ ಮೈಕ್ ಮೂಲಕ ಮೀನುಗಾರಿಕೆಗೆ ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆಯನ್ನು ನೀಡಲಾಗುತ್ತಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.
ಮೀನುಗಾರಿಕೆ ಮುಗಿಸಿ ಬಂದರಿಗೆ ಬಂದ ಬೋಟ್ಗಳು ಮತ್ತೆ ತೆರಳುತ್ತಿಲ್ಲ. ಈಗಾಗಲೇ ಶೇ.80ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಆದರೂ ಇನ್ನೂ 500-600ರಷ್ಟು ಬೋಟುಗಳು ಸಮುದ್ರ ಮಧ್ಯದಲ್ಲಿ ಮೀನುಗಾರಿಕೆ ನಿರತವಾಗಿವೆ. ಇವುಗಳಿಗೆ ಸಾಧ್ಯವಿದ್ದಷ್ಟು ವಯರ್ಲೆಸ್ ಸಂದೇಶ ಕಳುಹಿಸಿ ಕೂಡಲೇ ಹಿಂದಿರುಗುವಂತೆ ವಿನಂತಿಸಲಾಗುತ್ತಿದೆ. ಶನಿವಾರದೊಳಗೆ ಎಲ್ಲಾ ಬೋಟುಗಳು ಬಂದರಿಗೆ ಮರಳುವ ವಿಶ್ವಾಸವಿದೆ ಎಂದು ಸತೀಶ್ ಕುಂದರ್ ನುಡಿದರು.
ತಮಿಳುನಾಡು ಬೋಟುಗಳು
ಇದೇ ವೇಳೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿರುವ ತಮಿಳುನಾಡಿನ ಬೋಟುಗಳು ಅಲ್ಲಿನ ಸರಕಾರದ ಸೂಚನೆಯಂತೆ ಕರ್ನಾಟಕದ ಬಂದರುಗಳಿಗೆ ಬರುತಿದ್ದು, ಅವುಗಳಿಗೆ ಮೀನುಗಾರಿಕಾ ಇಲಾಖೆಯ ಸೂಚನೆಯಂತೆ ನಮ್ಮ ಬಂದರುಗಳಲ್ಲಿ ನಿಲ್ಲಲು ಅವಕಾಶ ನೀಡಲಾಗುತ್ತಿದೆ ಎಂದು ಸತೀಶ್ ಕುಂದರ್ ತಿಳಿಸಿದರು.
‘ಆದರೆ ಸಮುದ್ರದಲ್ಲಿ ಪ್ರಕ್ಷುಬ್ಧತೆಯ ಯಾವುದೇ ಪೂರ್ವಸೂಚನೆ ನಮಗೆ ಈವರೆಗೆ ಗೋಚರಿಸಿಲ್ಲ. ಆದರೂ ಸಹ ಇಲಾಖೆ ನೀಡಿರುವ ಎಚ್ಚರಿಕೆಯಂತೆ ನಾವ್ಯಾರೂ ಸಮುದ್ರಕ್ಕೆ ತೆರಳುತ್ತಿಲ್ಲ. ಹವಾಮಾನ ವೈಫರಿತ್ಯದ, ಚಂಡಮಾರುತದ ಪೂರ್ವಸೂಚನೆಗಳು ಸಿಕ್ಕಿದರೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟುಗಳು ಇಲ್ಲಿನ ಮಾಹಿತಿ ಸಿಗದಿದ್ದರೂ ಕೂಡಲೇ ಹಿಂದಿರುಗಿ ಬರಲಿವೆ’ ಎಂದು ಇಂದು ಮಲ್ಪೆ ಬಂದರಿಗೆ ಆಗಮಿಸಿದ ಮೀನುಗಾರರು ತಿಳಿಸಿದರು.