ಬ್ಯಾರಿ ಭಾಷೆ ಉಳಿದರೆ ಜನಾಂಗ ಉಳಿಯಲು ಸಾಧ್ಯ: ಉಮರ್ ಫಾರೂಕ್
ಪಡುಬಿದ್ರಿ, ಅ. 4: ಬ್ಯಾರಿ ಭಾಷೆ ಉಳಿದರೆ ಮಾತ್ರ ಜನಾಂಗ ಉಳಿಸಲು ಸಾಧ್ಯ ಎಂದು ಬ್ಯಾರಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯ ಎಸ್.ಪಿ. ಉಮರ್ ಫಾರೂಕ್ ಹೇಳಿದರು.
ಅವರು ಪಡುಬಿದ್ರಿಯ ಬೇಂಗ್ರೆ ರಸ್ತೆಯಲ್ಲಿರುವ ಅಕ್ಯೂರೆಟ್ ಅಪೆರೆಲ್ಸ್ನಲ್ಲಿ ಬುಧವಾರ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಪ್ರಾದೇಶಿಕ ಭಾಷೆಗಳ ಬಗ್ಗೆ ಜನರು ತಾತ್ಸಾರ ಮನೋಭಾವ ಬೆಳೆದಿದೆ. ಇದಕ್ಕೆ ಪಾಶ್ಚಾತ್ಯ ಸಂಸ್ಕೃತಿಯೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿ ಪೋಷಕರು ಮಾತೃ ಭಾಷೆಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. ಇಂಗ್ಲಿಷ್ ಭಾಷೆ ಇಂದಿನ ಅನಿಯಾರ್ವತೆ ಇದ್ದರೂ ಮಾತೃ ಭಾಷೆಯನ್ನು ಮರೆಯಬೇಡಿ ಎಂದು ಅವರು ಕರೆ ನೀಡಿದರು.
ರೋಟರಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ರಮೀಝ್ ಹುಸೈನ್, ಬ್ಯಾರಿ ಕಲಾವಿದ ಶೌಕತ್ ಪಡುಬಿದ್ರಿ ಉಪಸ್ಥಿತರಿದ್ದರು. ಜೆಡಿಎಸ್ ಮುಖಂಡ ಇಸ್ಮಾಯಿಲ್ ಫಲಿಮಾರು ಸ್ವಾಗತಿಸಿದರು. ಅಬ್ದುಲ್ ರಝಾಕ್ ಕನ್ನಂಗಾರ್ ವಂದಿಸಿದರು. ಅಬ್ದುಲ್ ಹಮೀದ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು.