ಬಂಟ್ವಾಳ: ಸಿಡಿಲಿನ ಆಘಾತಕ್ಕೊಳಗಾದ ನಾಲ್ವರು ಆಸ್ಪತ್ರೆಗೆ ದಾಖಲು
ಬಂಟ್ವಾಳ, ಅ.4: ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿನ ಆಘಾತಕ್ಕೊಳಗಾದ ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ವಗ್ಗ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಸಿಡಿಲಿನ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಇಂದು ಸಂಜೆ ಕಾಲೇಜಿನಿಂದ ಮನೆಗೆ ಮರಳುವ ವೇಳೆ ವಗ್ಗದ ನಿರ್ಕಾನ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲಿನ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿಯರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ರೀತಿ ದೇವಸ್ಯಪಡೂರು ಗ್ರಾಮದ ನಿವಾಸಿಗಳಾದ ಐಸಮ್ಮ (75), ಆಸ್ಯಮ್ಮ (23) ಅವರು ಮನೆಯಲ್ಲಿದ್ದಾಗ ಸಿಡಿಲಬ್ಬರಕ್ಕೆ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಗ್ರಾಮ ಕರಣಿಕರಾದ ಕುಮಾರ್ ಟಿ.ಸಿ, ಸುರೇಶ್ ಮತ್ತು ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಮೊನೀಶ್ ಅಲಿ, ಶಾಹುಲ್ ಎಸ್.ಎಚ್. ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.