ಎಂಐಟಿಯಲ್ಲಿ ಕೆಸಿಟಿಯು ಬ್ಯುಸಿನೆಸ್ ಇನ್ಕ್ಯೂಬೆಟರ್ ಕೇಂದ್ರ
ಉಡುಪಿ, ಅ.4: ಕುಂದಾಪುರ ತಾಲೂಕಿನ ಬಸ್ರೂರು ಸಮೀಪವಿರುವ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರ ಹಾಗೂ ಕೈಗಾರಿಕ ಸಂಘಗಳ ಸಹಯೋಗದಲ್ಲಿ ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ತಿನ (ಕೆಸಿಟಿಯು) ಆರ್ಥಿಕ ನೆರವಿನಿಂದ ಬ್ಯುಸಿನೆಸ್ ಇನ್ಕ್ಯೂಬೆಟರ್ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕಾಲೇಜಿನ ಸಂಶೋಧನ ಕೇಂದ್ರದ ನಿದೇರ್ಶಕ ಡಾ.ಅಬ್ದುಲ್ ಕರೀಮ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯುಸಿನೆಸ್ ಇನ್ಕ್ಯೂಬೆಟರ್’ ಕೇಂದ್ರದ ಪ್ರಮುಖ ಉದ್ದೇಶ ಹೊಸ ಉದ್ಯಮವನ್ನು ಪ್ರಾರಂಭಿಸಲು ಮುಂದೆ ಬರುವವರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ, ಸಹಾಯ ಒದಗಿಸುವುದಾಗಿದೆ ಎಂದರು.
ಹೊಸ ಉದ್ದಿಮೆ, ಕಂಪೆನಿಗಳ ಪ್ರಾರಂಭ, ಬೆಳವಣಿಗೆ ಮತ್ತು ವ್ಯಾಪಾರಾಭಿ ವೃದ್ಧಿಗೆ ಸಹಾಯಕವಾಗಿರುವ ಸೇವೆಗಳನ್ನು ಒದಗಿಸುವುದಾಗಿದೆ. ಕಛೇರಿಗೆ ಸ್ಥಳ ಹಂಚಿಕೆ, ನಿರ್ವಹಣಾ ತರಬೇತಿ ಹಾಗೂ ಆರಂಭಿಕ ಹಂತದಲ್ಲಿ ತಾಂತ್ರಿಕ ಮಾಹಿತಿ, ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದರು.
ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಬಹುಮುಖ್ಯವಾದ ವೃತ್ತಿಪರ ಸೇವೆಗಳನ್ನು ಒದಗಿಸಲಾಗುತ್ತದೆ. ಇನ್ಕ್ಯೂಬೆಟರ್ ಕೇಂದ್ರದಲ್ಲಿ 5000 ಚದರ ಅಡಿ ಜಾಗದಲ್ಲಿ 20 ಕ್ಯೂಬಿಕಲ್ಗಳು, ಸುಸಜ್ಜಿತ ಪ್ಯಾಬ್ ಲ್ಯಾಬ್ ಮತ್ತು ಟೆಸ್ಟಿಂಗ್ ಲ್ಯಾಬ್ಗಳು ಇರುತ್ತವೆ. ಪ್ರತಿ ವರ್ಷ ಕನಿಷ್ಟ 20 ಉದ್ದಿಮೆಗಳ ಆರಂಭದ ಗುರಿಯನ್ನು ಹೊಂದಲಾಗಿದೆ.
ಹೊಸದಾಗಿ ಉದ್ಯಮ ಆರಂಭಿಸಲು ಆಸಕ್ತರಾಗಿರುವವರು ಹಾಗೂ ಈಗಾಗಲೇ ಉದ್ಯಮ ನಡೆಸುತಿದ್ದು, ಅದನ್ನು ಅಪ್ಗ್ರೇಡ್ ಮಾಡಲಿಚ್ಚಿ ಸುವವರು ಸಹ ಈ ಕೇಂದ್ರದ ಸಹಾಯವನ್ನು ಪಡೆದುಕೊಳ್ಳಬಹುದು. ಅರ್ಹ ಮತ್ತು ಅನುಭವಿ ತಜ್ಞರು ಕೇಂದ್ರದಲ್ಲಿ ತರಬೇತಿ ನೀಡಲಿದ್ದಾರೆ. ಈ ಇನ್ಕ್ಯೂಬೆಟರ್ ಕೇಂದ್ರ ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಡಾ. ಅಬ್ದುಲ್ ಕರೀಮ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕಾಟಯ್ಯ ಜಿ.ಎಸ್, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ.ಮೆಲ್ವಿನ್ ಡಿಸೋಜ, ಮತ್ತು ಎಚ್.ಆರ್. ಮ್ಯಾನೇಜರ್ ಪ್ರಶಾಂತ ಎನ್.ಕೆ. ಉಪಸ್ಥಿತರಿದ್ದರು.