ಮಂಗಳೂರು: ಸ್ವಚ್ಛತೆಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮ
ಮಂಗಳೂರು, ಅ.4: ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮಂಗಳೂರು ಮತ್ತು ಶಿವಮೊಗ್ಗ ಇಲಾಖೆಯು ಡಾ.ಪಿ.ದಯಾನಂದ ಪೈ,ಸದಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಸಹಯೋಗದಲ್ಲಿ ಸ್ವಚ್ಛತೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವು ಗುರುವಾರ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ಉಪಮೇಯರ್ ಕೆ.ಮುಹಮ್ಮದ್ ಮಾತನಾಡಿ ‘ಸ್ವಚ್ಛತೆಯ ಬಗ್ಗೆ ಮನಸ್ಸು ಸಂಕಲ್ಪಿಸಿದಾಗ ಮಾತ್ರ ನಗರ ಸ್ಚಚ್ಛವಾಗಿ ಸುಂದರವಾಗಿಡಲು ಸಾಧ್ಯ. ನಾಲ್ಕು ವರ್ಷದ ಹಿಂದೆ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನವು ಇಂದು ದೇಶಾದ್ಯಂತ ಬಿರುಸಿನಿಂದ ನಡೆಯುತ್ತಿದೆ. ದೇಶದ ಪ್ರತಿಯೊಂದು ವಾರ್ಡ್, ಗ್ರಾಮ, ನಗರ ಸ್ವಚ್ಚವಾದಾಗ ಮಾತ್ರ ಅಭಿಯಾನ ಯಶ್ವಸ್ವಿಯಾಗಲು ಮತ್ತು 2019ರೊಳಗೆ ಗಾಂಧೀಜಿಯ ಸುಂದರ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು,.
ಭಾರತೀಯ ವಾರ್ತಾ ಸೇವೆಯ ಉಪನಿರ್ದೇಶಕ ಕೆ.ಪಿ.ರಾಜೀವನ್, ಶಿವಮೊಗ್ಗ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕರಾಂ ಗೌಡ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಯೋಜನಾ ಸಂಯೋಜಕ ಮಂಜುಳಾ ಭಾಗವಹಿಸಿದ್ದರು.
ರೋಹಿತ್ ಜಿ.ಎಸ್. ಸ್ವಾಗತಿಸಿದರು. ಡಾ.ಶೈಲರಾಣಿ ಬಿ. ವಂದಿಸಿದರು. ಯಶ್ವಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಪೂರ್ವಭಾಯಾಗಿ ಸ್ವಚ್ಛ ಭಾರತದ ಕುರಿತು ಚಿತ್ರ ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ, ಛಾಯಚಿತ್ರ ಪದರ್ಶನ ಮತ್ತು ಜಾಗೃತಿ ಜಾಥಾ ನಡೆಯಿತು. ಸುಮಾರು 2,000 ವಿದ್ಯಾರ್ಥಿಗಳನ್ನು ಒಳಗೊಂಡ ಜಾಗೃತಿ ಜಾಥಾವು ವೆಂಕಟರಮಣ ದೇವಸ್ಥಾನದಿಂದ ಪ್ರಾರಂಭವಾಗಿ ಸೆಂಟ್ರಲ್ ಮಾರ್ಕೆಟ್ ಮಾರ್ಗವಾಗಿ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಂಡಿತು. ಸ್ವಚ್ಛ ಭಾರತದ ಅಭಿಯಾನದ ಕುರಿತು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.