ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಮನವಿ
ಪುತ್ತೂರು, ಅ. 4: ಇತ್ತೀಚೆಗೆ ಪುತ್ತೂರಿನ ಕಾಲೇಜೊಂದರಲ್ಲಿ ಕಲಿಯುತ್ತಿದ್ದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ತಣ್ಣಿರು ಹಳ್ಳಿ ನಿವಾಸಿ ಅಣ್ಣಪ್ಪ ಎಂಬವರ ಪುತ್ರಿ ವಿದ್ಯಾರ್ಥಿನಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಮಾನಗಳಿದ್ದು, ಈ ಹಿನ್ನಲೆಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಗುರುವಾರ ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿನಿ ಆತ್ಮಹತ್ಯೆ ಮಾಡುವ ಮೊದಲು 2 ಪುಟಗಳ ಡೆತ್ನೋಟ್ ಬರೆದಿಟ್ಟಿದ್ದು, ಪೊಲೀಸ್ ವಶದಲ್ಲಿರುವ ಆ ಡೆತ್ನೋಟನ್ನು ವಿದ್ಯಾರ್ಥಿಗಳಿಗೆ ಬಹಿರಂಗಗೊಳಿಸಬೇಕು ಹಾಗೂ ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮಾನಸಿಕ ಖಿನ್ನತೆ, ಕಲಿಕಾ ಒತ್ತಡಗಳನ್ನು ಪರಿಹರಿಸಲು ಶಾಲಾ ಕಾಲೇಜುಗಳಲ್ಲಿ ಸಮಾಲೋಚನಾ ಕೇಂದ್ರಗಳನ್ನು ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಸವಾದ್ ಕಲ್ಲರ್ಪೆ, ನಗರ ಸಮಿತಿ ಅಧ್ಯಕ್ಷ ಹಾರಿಸ್ ಪಡೀಲ್, ಕಾರ್ಯದರ್ಶಿ ಸಫ್ವಾನ್ ಮುಕ್ರಂಪಾಡಿ, ಕಾಲೇಜು ಘಟಕದ ಅಧ್ಯಕ್ಷ ಶಕೀಲ್ ಬೊಳುವಾರು, ರಾಯಿಝ್ ಹಾಗೂ ಅಫೀಝ್ ಕೂರ್ನಡ್ಕ ಉಪಸ್ಥಿತರಿದ್ದರು.