ಪಂಪ ಪ್ರಶಸ್ತಿ ಪುರಸ್ಕೃತ ಡಾ. ಬಿ.ಎ. ಸನದಿರಿಗೆ ‘ಕಾರಂತ ಪ್ರಶಸ್ತಿ-2018’
ಮಂಗಳೂರು, ಅ. 5: ಜನಪರ ಧೋರಣೆ, ಜೀವನಪರ ನಿಲುವು ಹೊಂದಿರುವ ಕನ್ನಡದ ಉದಾರವಾದಿ ಕವಿ, ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯ ಬಿ.ಎ. ಸನದಿ ( ಬಾಬಾ ಸಾಹೇಬ ಅಹ್ಮದ್ ಸಾಹೇಬ ಸನದಿ) ಅವರಿಗೆ ಕಡಲತೀರದ ಭಾರ್ಗವರೆಂದೇ ಬಿರುದಾಂಕಿತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಹೆಸರಲ್ಲಿ ನೀಡಲಾಗುವ ‘ಕಾರಂತ ಪ್ರಶಸ್ತಿ-2018’ ನೀಡಿ ಗೌರವಿಸಲಾಗುವುದು.
ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ. 10 ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರಂತ ಹುಟ್ಟು ಹಬ್ಬ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕವಿ. ಬಿ.ಎ. ಸನದಿ: ಜ್ಞಾನ ವೃದ್ಧರೂ ಆಗಿರುವ ಬಿ.ಎ. ಸನದಿಯವರು ಮಹಾರಾಷ್ಟ್ರ ರಾಜ್ಯದ ಮುಂಬೈಯಲ್ಲಿದ್ದುಕೊಂಡು ಕನ್ನಡ ಸಾಹಿತ್ಯ ಕೃಷಿಯನ್ನು ಮುಂದುವರಿಸಿಕೊಂಡು ಬಂದಿರುವರು.
2015ರಲ್ಲಿ ಸಮಗ್ರ ಸಾಹಿತ್ಯಕ್ಕಾಗಿ ಕರ್ನಾಟಕ ಸರಕಾರದಿಂದ ‘ಪಂಪ ಪ್ರಶÀಸ್ತಿ’ ಪಡೆದಿರುವ ಸನದಿಯವರಿಗೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಅಕಾಡೆಮಿ ಪ್ರಶಸ್ತಿ , ಭಾರತ ಸರಕಾರದ ಪುರಸ್ಕಾರ, ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ನಿರಂಜನ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಪ್ರಾಪ್ತವಾಗಿವೆ. ಬದುಕಿನ ಬಗ್ಗೆ ಗಾಢವಾದ ಅನುರಕ್ತಿಯನ್ನು ಮಾನವೀಯ ಸಂಬಂಧಗಳ ಬಗ್ಗೆ ಅದಮ್ಯವಾದ ಶ್ರದ್ಧೆಯನ್ನು ಉಳಿಸಿಕೊಂಡು ಬಂದ ಸನದಿಯವರು ಸಾಹಿತ್ಯಿಕವಾಗಿ ಮಾತ್ರವಲ್ಲ ಸಾಂಸ್ಕೃತಿಕವಾಗಿಯೂ ಮುಖ್ಯರೆನಿಸಿಕೊಂಡ ಅಪರೂಪದ ಕವಿ. ಇವರು ಕನ್ನಡವನ್ನು ಕೇವಲ ಬರವಣಿಗೆಯ ಮಾಧ್ಯಮವಾಗಿರಿಸಿಕೊಳ್ಳದೆ ಬದುಕಿನ ಮಾಧ್ಯಮವನ್ನಾಗಿ ಬಳಸಿಕೊಂಡಿರುವರು. ಸನದಿ ಇರುವಲ್ಲಿ ಕನ್ನಡ ವಿರುತ್ತದೆ ಎಂಬ ಮಾತನ್ನು ಒಳನಾಡು ಹೊರನಾಡುಗಳಲ್ಲಿ ದಿಟಮಾಡಿ ತೋರಿದ್ದಾರೆ. ಹೀಗಾಗಿ ಇವರಿಗೆ ಕನ್ನಡ ಪರಿಚಾರಕರ ಪರಂಪರೆಯಲ್ಲಿಯೂ ಪ್ರಮುಖ ಸ್ಥಾನ ಸಲ್ಲುತ್ತದೆ. ಸನದಿಯವರು ಬರೆದ 21 ಕವನ ಸಂಗ್ರಹ, 3 ಕಥಾ ಸಂಕಲನ. 8 ಮಕ್ಕಳ ಸಾಹಿತ್ಯ ಕೃತಿಗಳು, 4 ವಿಮರ್ಶಾ ಕೃತಿಗಳು, 2 ನಾಟಕಗಳು, 7 ಸಂಪಾದಿತ ಕೃತಿಗಳು, 8 ಭಾಷಾಂತರ ಕೃತಿಗಳು. ಹೀಗೆ ವಿವಿಧ ಸಾಹಿತ್ಯಿಕ ಕೃತಿಗಳ ರಚನೆಯ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ.
ಕವಿ ಬಿ.ಎ. ಸನದಿಯವರಿಗೆ ಕಾರಂತ ಹುಟ್ಟುಹಬ್ಬದ ಸಂದರ್ಭ ‘ಕಾರಂತ ಪ್ರಶಸ್ತಿ’ ಪ್ರದಾನ ಮಾಡುವುದಕ್ಕೆ ತುಂಬಾ ಹೆಮ್ಮೆಯೆನಿಸುತ್ತದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿರುವರು.