ರೋಗಿಗಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಉದ್ದೇಶ: ಜಿ.ಶಂಕರ್
ಉಡುಪಿಯಲ್ಲಿ 450ಕ್ಕೂ ಅಧಿಕ ಮಂದಿಗೆ ನೆರವು ವಿತರಣೆ
ಉಡುಪಿ, ಅ.5: ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಾವಿರಾರು ಬಡ ರೋಗಿಗಳಿಗೆ ಧನಸಹಾಯ ಮಾಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದ್ದಾರೆ.
ಡಾ.ಜಿ.ಶಂಕರ್ ಅವರು 63ನೇ ಹುಟ್ಟುಹಬ್ಬದ ಪ್ರಯುಕ್ತ ಜಿ.ಶಂಕರ್ ಫ್ಯಾಮಲಿ ಟ್ರಸ್ಟ್ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಯ ವತಿಯಿಂದ ಆಸಪತ್ರೆಯಲ್ಲಿ ಆಯೋಜಿಸಲಾದ ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಧನ ಸಹಾಯವನ್ನು ವಿತರಿಸಿ ಅವರು ಮಾತನಾಡುತಿದ್ದರು.
ಗುರುವಾರ ಮಂಗಳೂರಿನ ಮೂರು ಆಸ್ಪತ್ರೆಗಳಲ್ಲಿ 500ಕ್ಕೂ ಅಧಿಕ ಮಂದಿ ರೋಗಿಗಳಿಗೆ ಧನಸಹಾಯ ವಿತರಿಸಲಾಗಿದೆ. ಇಂದು ಉಡುಪಿಯಲ್ಲಿ ನಾಲ್ಕು ಆಸ್ಪತ್ರೆಗಳಲ್ಲಿ ಅದೇ ರೀತಿ ಧನಸಹಾಯವನ್ನು ವಿತರಿಸಲಾಗುತ್ತಿದೆ ಎಂದರು.
ಬಡತನದ ಮಧ್ಯೆಯೇ ಬೆಳೆದು ಬಂದ ನನಗೆ ಬಡವರ ಬವಣೆಯ ಅರಿವು ಚೆನ್ನಾಗಿದೆ. ಇಂದು ಸಾಮಾನ್ಯರನ್ನೂ ಬಾಧಿಸುವ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ತುಂಬಾ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಎಟುಕುವಂತಿಲ್ಲ. ಹೀಗಾಗಿ ಅವರಿಗೆ ನಮಮ ಕೈಲಾದ ನೆರವನ್ನು ನೀಡುವ ಮೂಲಕ ಧೈರ್ಯವನ್ನು ತುಂಬುವ ಪ್ರಯತ್ನ ಇದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ವತಿಯಿಂದ ಕೇಕ್ ಕತ್ತರಿಸಿ ಡಾ.ಜಿ.ಶಂಕರ್ರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಲ್ಲದೇ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರ ಚಿಕಿತ್ಸಾಲಯದ ಡಾ.ಕೃಷ್ಣಪ್ರಸಾದ್, ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಎ.ರಾಜಾ, ಡಾ.ಮೋಹನದಾಸ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್, ಜಿ.ಶಂಕರ್ ಅವರ ಅಳಿಯ ನವೀನ್ ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಡಿಯಗೋ ಕ್ವಾಡ್ರಸ್ ವಂದಿಸಿ, ರಾಜೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕೆಎಂಸಿ ಮಣಿಪಾಲ: ಇಂದು ಬೆಳಗ್ಗೆ ಮಣಿಪಾಲದ ಮಾಹೆಯ ಸಹಯೋಗದಲ್ಲಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಒಟ್ಟು ಸುಮಾರು 309 ರೋಗಿಗಳಿಗೆ 60 ಲಕ್ಷ ರೂ. ವೌಲ್ಯದ ಚೆಕ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕೆಎಂಸಿ ಡೀನ್ ಡಾ.ಪ್ರಜ್ಞಾ ರಾವ್, ಎಂಎಸ್ ಡಾ.ಅವಿನಾಶ್ ಶೆಟ್ಟಿ, ಟ್ರಸ್ಟ್ನ ಆನಂದ್ ಎಸ್.ಕೆ. ಹಾಗೂ ಇತರರು ಉಪಸ್ಥಿತರಿದ್ದರು.
ಉಡುಪಿಯಲ್ಲಿ 450 ಮಂದಿಗೆ ನೆರವು ವಿತರಣೆ
ನಾಡೋಜ ಡಾ.ಜಿ.ಶಂಕರ್ ಅವರ 63ನೇ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸುಮಾರು 450 ಮಂದಿಗೆ ಸಹಾಯಧನವನ್ನು ವಿತರಿಸಲಾಯಿತು.
ಮಣಿಪಾಲ ಕೆಎಂಸಿಯಲ್ಲಿ 129 ಕ್ಯಾನ್ಸರ್ ಹಾಗೂ 154 ಕಿಡ್ನಿ ರೋಗಿಗಳಿಗೆ, ಆದರ್ಶ ಆಸ್ಪತ್ರೆಯಲ್ಲಿ 20 ಕ್ಯಾನ್ಸರ್ ಹಾಗೂ 24 ಕಿಡ್ನಿ ರೋಗಿಗಳಿಗೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ತಲಾ ಐವರು ರೋಗಿಗಳಿಗೆ ಹಾಗೂ ಡಾ.ಟಿಎಂಎ ಪೈ ಆಸ್ಪತ್ರೆಯ 26 ಕಿಡ್ನಿ ರೋಗಿಗಳಿಗೆ ನೆರವು ನೀಡಲಾಯಿತು. ಅಲ್ಲದೇ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ 44 ಕ್ಯಾನ್ಸರ್ ಹಾಗೂ 26 ಕಿಡ್ನಿ ರೋಗಿಗಳಿಗೆ ನೆರವು ವಿತರಿಸಲಾಯಿತು.
ಕ್ಯಾನ್ಸರ್ ರೋಗಿಗಳಿಗೆ ತಲಾ 20,000ರೂ., ಮಕ್ಕಳ ಕ್ಯಾನ್ಸರ್ಗೆ ತಲಾ 30,000 ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುವ ರೋಗಿಗಳಿಗೆ ತಲಾ 15,000ರೂ.ಗಳನ್ನು ವಿತರಿಸಲಾಯಿತು ಎಂದು ಟ್ರಸ್ಟ್ ತಿಳಿಸಿದೆ.