ವಸತಿ ಯೋಜನೆ ಸಮಸ್ಯೆಗಳ ಕುರಿತು ಕೋಟ ಚರ್ಚೆ
ಉಡುಪಿ, ಅ.5: ಕರಾವಳಿ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಯೋಜನೆ ಪಡೆಯುವ ಫಲಾನುಭವಿಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಇಂದು ಬೆಂಗಳೂರಿನಲ್ಲಿ ವಿಧಾನಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಸತಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದರು.
ಮನೆ ದುರಸ್ಥಿಗಾಗಿ ಹಣ ಪಡೆದ ಬಡವರು ಹೊಸಮನೆ ಪಡೆಯುವಾಗ, ನಕಲು ಹೆಸರು ಎಂದು ವಸತಿ ಇಲಾಖೆಯ ವೆಬ್ಸೈಟ್ನಲ್ಲಿ ತೋರಿಸುತ್ತಿದ್ದು, ಅದರ ತಿದ್ದುಪಡಿ ಮಾಡಬೇಕು. ಬಡವರು ಮನೆ ಮಂಜೂರಾತಿ ಪಡೆದು, ಹಣದ ಸಮಸ್ಯೆಯ ಕಾರಣಕ್ಕಾಗಿ ಮನೆ ಕಟ್ಟಲಾಗದೇ ಮುಂದಿನ ವರ್ಷದಲ್ಲಿ ಫಲಾನುಭವಿಗಳ ಪುನರಾಯ್ಕೆ ಸಂದರ್ಭದಲ್ಲಿ, ಪಡೆದ ಮಂಜೂರಾತಿಗೆ ಹಿಂದೆ ಮನೆ ಪಡೆದಿದ್ದಾರೆಂದು ತಪ್ಪು ಮಾಹಿತಿ ತೋರಿಸಿ ಬ್ಲಾಕ್ ಆಗುವುದು, ಆನ್ಲೈನ್ನಲ್ಲಿ ನಿವೇಶನದ ಹಕ್ಕುಪತ್ರಕ್ಕಾಗಿ ಸೂಕತಿ ದಾಖಲೆಯನ್ನು ಸಲ್ಲಿಸಿದ್ದರೂ ಹಲವಾರು ವರ್ಷಗಳಿಂದಲೂ ನಿವೇಶನ ನೀಡದೇ ಇರುವ ಸಮಸ್ಯೆಗಳನ್ನು ಕೋಟ ಅವರು ಅಧಿಕಾರಿಗಳ ಗಮನಕ್ಕೆ ತಂದರು.
ಬಸವ ವಸತಿ, ಇಂದಿರಾ ಆವಾಜ್, ಅಂಬೇಡ್ಕರ್ ಯೋಜನೆ ಮಂಜೂರಾತಿ ಪಡೆದು ನಿಗಮದಲ್ಲಿ ಅನುಮೋದನೆಗೆ ಬಾಕಿಯಿರುವುದು, ವಸತಿ ಇಲಾಖೆ ಹಣ ಬಿಡುಗಡೆ ಮಾಡಿದರೂ ಸಹ ಬ್ಯಾಂಕುಗಳು ಸಾಲ ಕೊಡದೆ ಇರುವುದು. ಜಿಪಿಎಸ್ ಫೋಟೊ ಆಡಿಟ್ ಮಾಡುವಾಗ ದೋಷದಿಂದ ಮನೆಗಳನ್ನು ಬ್ಲಾಕ್ ಮಾಡುವುದು, ಆಧಾರ್ ಕಾರ್ಡ್ ಮತ್ತು ಫಲಾನುಭವಿಯ ಹೆಸರಿನಲ್ಲಿ ಹೊಂದಾಣಿಕೆಯಾಗದೇ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ತೊಂದರೆ ಸೇರಿದಂತೆ ಇತರ ವಸತಿಯೋಜನೆಯ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕರ ಕಚೇರಿಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ವಸತಿ ಇಲಾಖೆಯ ಅಧಿಕಾರಿಗಳೊಂದಿಗೆ ಕೋಟ ಅವರ ವಿಶೇಷ ಅಧಿಕಾರಿ ಧರ್ಮಪ್ಪ ಉಪಸ್ಥಿತರಿದ್ದರು.