ಮೀನುಗಾರರ ಸಮಸ್ಯೆಗಳ ಪರಿಹಾರ-ಕಾರ್ಯಯೋಜನೆಗೆ ಹೊಸ ಸಮಿತಿ ರಚನೆ
ಮಂಗಳೂರು, ಅ.5: ರಫ್ತು ಉದ್ಯಮದಲ್ಲಿ ಮೀನುಗಾರಿಕೆಯ ಪಾಲು ಅಪಾರವಿದ್ದರೂ ಕೂಡಾ ಯಾಂತ್ರಿಕೃತ ಮೀನುಗಾರರು ಡೀಸೆಲ್ ಮತ್ತು ಸೀಮೆಎಣ್ಣೆ ಯ ಬೆಲೆ ಏರಿಕೆಯಿಂದ ತತ್ತರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯು ಇತ್ತೀಚೆಗೆ ಮುರ್ಡೇಶ್ವರದಲ್ಲಿ ತುರ್ತು ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿತು. ಆ ಬಳಿಕ ರಾಜ್ಯದ ಯಾಂತ್ರಿಕೃತ ಮತ್ತು ನಾಡದೋಣಿ ಮೀನುಗಾರರ ಸಂಘದ ಪ್ರತಿನಿಧಿಗಳು ಗೋವಾದಲ್ಲಿ ಸಭೆ ಸೇರಿದರು.
ಈ ಸಭೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳ್ನಾಡು ಮತ್ತಿತರ ರಾಜ್ಯದ ಪ್ರತಿನಿಧಿಗಳು ಕೂಡಾ ಪಾಲ್ಗೊಂಡಿದ್ದರು. ರಾಷ್ಟ್ರಾದ್ಯಂತ ಮೀನುಗಾರರು ಎದುರಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮತ್ತು ಮುಂದಿನ ರೂಪುರೇಷಗಳ ಕಾರ್ಯಯೋಜನೆಗೆ ಇತ್ತೀಚೆಗೆ ಗೋವಾದಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಮೀನುಗಾರರ ಎಸೋಸಿಯೇಶನ್ ಎಂಬ ಸಮಿತಿಯೊಂದನ್ನು ರಚಿಸಲಾಯಿತು.
ಈ ಸಮಿತಿಯ ಅಧ್ಯಕ್ಷರಾಗಿ ಗುಜರಾತ್ನ ವೆಲ್ಜೀ ಬಾ ಮಸನಿ, ಉಪಾಧ್ಯಕ್ಷರಾಗಿ ಕರ್ನಾಟಕದ ಮನೋಹರ ಬೋಳೂರು, ಕಾರ್ಯದರ್ಶಿಯಾಗಿ ಮುಲ್ಪೆಯ ದಯಾನಂದ ಸುವರ್ಣ, ಕೋಶಾಧಿಕಾರಿಯಾಗಿ ಗೋವಾದ ಸಿಡ್ನಿ ಘರ್ಟಾಡೊ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಪೆಯ ಯಶಪಾಲ್ ಸುವರ್ಣ ಆಯ್ಕೆಯಾಗಿದ್ದಾರೆ.
ಸಮಿತಿಯು ಕರಾವಳಿಯ ಸಂಸದರನ್ನು ಭೇಟಿ ಮಾಡಿ ಮೀನುಗಾರರು ಎದುರಿಸುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಬಳಿಕ ಪ್ರಧಾನಿ ಹಾಗೂ ಕೇಂದ್ರದ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿತು. ..