ನೆಲ,ಜಲ, ಪರಿಸರ ಸಂರಕ್ಷಣೆ ಎಲ್ಲರ ಹೊಣೆ-ಸಂಜೀವ ಮಠಂದೂರು
'ನಮ್ಮ ಕಸ ನಮ್ಮ ಜವಾಬ್ದಾರಿ ಕಾರ್ಯಾಗಾರ'
ಪುತ್ತೂರು, ಅ. 5: ನಮ್ಮ ದೇಶದ ರಕ್ಷಣೆಯ ಜತೆಗೆ ನೆಲ, ಜಲ ಹಾಗೂ ಪರಿಸರ ರಕ್ಷಣೆ ಪ್ರಜೆಗಳಾದ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಪ್ರತಿಯೊಬ್ಬ ನಾಗರಿಕ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಶುಕ್ರವಾರ ಪುತ್ತೂರು ರೋಟರಿ ಕ್ಲಬ್ ವತಿಯಿಂದ ನಡೆದ 'ನಮ್ಮ ಕಸ -ನಮ್ಮ ಜವಾಬ್ದಾರಿ' ಯೋಜನೆಯ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕವಾಗಿ ಎಲ್ಲರೂ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ. ನಮ್ಮಲ್ಲಿನ ಆಹಾರ ಮತ್ತು ಜೀವನ ಪದ್ಧತಿಯೂ ಬದಲಾಗಿದೆ. ಬದಲಾದ ಈ ಸಂದರ್ಭದಲ್ಲಿ ನಾವು ಸ್ವಚ್ಛತೆಗೆ ಪ್ರಧಾನ ಆಧ್ಯತೆ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ ಪುತ್ತೂರು ನಗರಸಭೆ ಸ್ವಚ್ಛತಾ ಕಾರ್ಯಕ್ಕಾಗಿ ವಾರ್ಷಿಕ ರೂ. 2 ಕೋಟಿ ವ್ಯಯ ಮಾಡುತ್ತಿದೆ. 50ಸಾವಿರ ಜನಸಂಖ್ಯೆ ದಾಟಿರುವ ಪುತ್ತೂರು ನಗರದಲ್ಲಿ ಸ್ವಚ್ಛತೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವುದು ಇಲ್ಲಿನ ಎಲ್ಲಾ ನಾಗರಿಕರ ಸಾಮೂಹಿಕ ಜವಾಬ್ದಾರಿಯಾಗಿದ್ದು, ನಗರಸಭೆಯ ಈ ಪ್ರಯತ್ನಕ್ಕೆ ನಾಗರಿಕರ ಸಹಕಾರ ಅಗತ್ಯವಿದೆ ಎಂದರು.
ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ಮಾತನಾಡಿ ಶುಚಿತ್ವ ಮಾನವ ಧರ್ಮವಾಗಿದೆ. ಸ್ವಚ್ಛತೆ ಮತ್ತು ಪರಿಸರ ನೈರ್ಮಲ್ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗುವ ಕಾಲಘಟ್ಟದಲ್ಲಿ ಈ ದೇಶ ಇದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ ಎಂದರು.
ಬೆಂಗಳೂರು 'ಸಾಹಸ್' ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯಾ ತಿವಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ಎ.ಜೆ. ರೈ, ಆಸ್ಕರ್ ಆನಂದ್ ಉಪಸ್ಥಿತರಿದ್ದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಪಿ. ವಾಮನ ಪೈ ಸ್ವಾಗತಿಸಿದರು. ರೋಟರಿ ಕ್ಲಬ್ ಸಮುದಾಯ ಸೇವಾ ನಿರ್ದೇಶಕ ಜೈರಾಜ್ ಭಂಡಾರಿ ವಂದಿಸಿದರು. ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಮತ್ತು ಡಾ. ಗಾಯತ್ರಿ ನಿರೂಪಿಸಿದರು.