ಮುನ್ನೂರು ಗ್ರಾಮ ಪಂಚಾಯತ್: ಪೋರ್ಜರಿ ದಾಖಲೆ, ಪ್ರಕರಣ ದಾಖಲು
ಉಳ್ಳಾಲ, ಅ. 5: ಮುನ್ನೂರು ಗ್ರಾಮ ಪಂ. ಕಚೇರಿಯ ಅಭಿವೃದ್ಧಿ ಅಧಿಕಾರಿಯ ನಕಲಿ ಸಹಿ ಹಾಗೂ ನಕಲಿ ಸೀಲು, ಲೆಟರ್ ಪ್ಯಾಡ್ ಬಳಸಿ ದಾಖಲೆ ಸೃಷ್ಟಿಸಿದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋರ್ಜರಿ ಪ್ರಕರಣ ದಾಖಲಾಗಿದೆ.
ಸೆ. 13ರಂದು ದಾಖಲೆಯನ್ನು ಪೋರ್ಜರಿ ಮಾಡಲಾಗಿದ್ದು ಆ ದಿನ ಮುನ್ನೂರು ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯೇ ಇರಲಿಲ್ಲ. ಹಿಂದೆ ಇದ್ದಂತಹ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಎಂಬವರು ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಅವರ ಸಹಿಯನ್ನೇ ನಕಲಿ ಮಾಡಿ ದಾಖಲೆ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.
ಮುನ್ನೂರು ನಿವಾಸಿ ಅಬ್ದುಲ್ ನಾಸಿರ್ ಯಾನೆ ಸೀದಿ ಬಾವ ಮಗಳ ಆಧಾರ್ ಕಾರ್ಡು ದಾಖಲಾತಿ ಬದಲಾವಣೆಗಾಗಿ ಪಂಚಾಯತ್ ಗೆ ಆಗಮಿಸಿದ್ದರು. ಆ ಸಂದರ್ಭ ಸಿಬ್ಬಂದಿ ದಾಖಲಾತಿ ಪರಿಶೀಲನೆ ವೇಳೆ ಕಡತದಲ್ಲಿ ಯಾವುದೇ ರೀತಿಯ ರೆಫರೆನ್ಸ್ ಸಂಖ್ಯೆ ಪತ್ತೆಯಾಗಿರಲಿಲ್ಲ. ಆ ಬಗ್ಗೆ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ, ಸಹಿ ಬಳಸಿ ದಾಖಲಾತಿ ನಡೆಸಿರುವುದು ಬೆಳಕಿಗೆ ಬಂದಿದೆ. ಆ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಈಗಿನ ಪಿಡಿಒ ರವೀಂದ್ರ ರಾಜೀವ ನಾಯ್ಕ್ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರ ಆಧಾರದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.