ಪುತ್ತೂರು : ಮಸೀದಿ ತೋಟದಿಂದ ಅಡಿಕೆ ಕಳವು: ಆರೋಪಿ ಸೆರೆ
ಪುತ್ತೂರು, ಅ. 5: ಮಸೀದಿಯೊಂದಕ್ಕೆ ಸೇರಿದ ಅಡಿಕೆ ತೋಟದಿಂದ ಅಡಿಕೆ ಕಳವು ಮಾಡಲು ಯತ್ನಿಸಿದ ಆರೋಪದಲ್ಲಿ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಖಮಲೆ ಎಂಬಲ್ಲಿ ಗುರುವಾರ ಸಂಭವಿಸಿದೆ.
ಕೇರಳದ ಕಾಸರಗೋಡು ತಾಲ್ಲೂಕಿನ ಪೆರ್ಲ ನಿವಾಸಿ ಸೀತಾರಾಮ ಆರೋಪಿ ಎಂದು ಗುರುತಿಸಲಾಗಿದೆ.
ಮಸೀದಿಯ ತೋಟದಲ್ಲಿ ಅಡಿಕೆ ಹೆಕ್ಕಿ ಗೋಣಿ ಚೀಲದಲ್ಲಿ ತುಂಬಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ವಿಚಾರಿಸಿದಾಗ `ತಾನು ಸ್ನಾನ ಮಾಡಲು ಬಂದಿದ್ದು, ಅಡಿಕೆಯನ್ನು ಕಂಡು ಕಳವು ಮಾಡಲು ಹೊರಟಿರುವುದಾಗಿ' ತಿಳಿಸಿದ್ದಾನೆ. ಅಲ್ಲದೆ ಅಸ್ಪಷ್ಟ ಮಾಹಿತಿ ನೀಡಿದ್ದು, ಈ ಹಿನ್ನಲೆಯಲ್ಲಿ ಸ್ಥಳೀಯರು ಸೇರಿಕೊಂಡು ಇನ್ನಷ್ಟು ವಿಚಾರಿಸಿದ ವೇಳೆ, ಆತ ಅಡಿಕೆ ಕಳವು ಯತ್ನಿಸಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಸ್ಥಳೀಯರು ಆತನನ್ನು ಸಂಪ್ಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.