ಮಂಗಳೂರು ವಿವಿಯಲ್ಲಿ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ, ಅ. 5: ಗಣಿತಶಾಸ್ತ್ರವಿಲ್ಲದ ತಂತ್ರಜ್ಞಾನಗಳು ಅಪೂರ್ಣವಾಗಿರುತ್ತದೆ. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಗಣಿತ ವಿಜ್ಞಾನದ ಪಾತ್ರ ಪ್ರಮುಖ ವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಪ್ರಾಯೋಜಿತ ಎರಡು ದಿನಗಳ ಗಣಿತ ವಿಜ್ಞಾನ ವಿಶೇಷ ಉಪನ್ಯಾಸ ಮಾಲೆ ಕಾರ್ಯಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟವುಳ್ಳ ಸಂಶೋಧನಾ ಕಾರ್ಯಗಳು ನಡೆಯಬೇಕಾದರೆ ಸಂಶೋಧಕರು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಐಎನ್ಎಸ್ಎ ಹಿರಿಯ ವಿಜ್ಞಾನಿ ಪ್ರೊ.ಎನ್.ಎಂ.ಬುಜುರ್ಕೆ ನಮ್ಮ ಜೀವನದಲ್ಲಿ ಪರಿಶ್ರಮವೊಂದಿದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯಾಗುತ್ತದೆ. ಗಣಿತ ಕ್ಷೇತ್ರದಲ್ಲಿ ಮಾಡುವ ಸಾಧನೆಗೆ ತಜ್ಞರಿಂದ ಸಹಾಯ, ಮಾರ್ಗದರ್ಶನ ದೊರೆತರೆ ನೀವೂ ಕೂಡ ಭಾರತ ಕಂಡ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ರಂತೆ ಆಗಬಹುದು ಎಂದು ಅಭಿಪ್ರಾಯ ಪಟ್ಟರು.
ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಕಿಶೋರಿ ಪಿ. ನಾರಾಯಣಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಟಿಐಎಫ್ಆರ್ ಕೇಂದ್ರದ ಪ್ರೊ. ಜಿ.ಡಿ. ವೀರಪ್ಪ ಗೌಡ, ಮಂವಿವಿ ಗಣಿತಶಾಸ್ತ್ರ ವಿಭಾಗದ ಅಡ್ಜಂಕ್ಟ್ ಪ್ರಾಧ್ಯಾಪಕರಾದ ಪ್ರೊ. ಎಸ್. ಪರಮೇಶ್ವರ ಭಟ್ಟ, ಮಂಗಳೂರು ವಿವಿ ವಿಜ್ಞಾನ ನಿಕಾಯದ ಡೀನ್ ಪ್ರೊ.ಬಾಲಕೃಷ್ಣ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಹಾಯಕ ಪ್ರಾದ್ಯಾಪಕ ಮೋಹನ್ ಕೆ.ಎಸ್ ಅವರು ಸ್ವಾಗತಿಸಿ, ಡಾ.ಚಂದು ಹೆಗಡೆ ವಂದಿಸಿದರು. ವಿದ್ಯಾರ್ಥಿನಿ ಅನು ಕಾರ್ಯಕ್ರಮ ನಿರೂಪಿಸಿದರು.