ಮಂಗಳೂರು: ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಖಂಡಿಸಿ ವಿದ್ಯಾರ್ಥಿಗಳ ಧರಣಿ
*ಎಕ್ಸ್ಪರ್ಟ್ ಕಾಲೇಜು ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು, ಅ.6: ಗೋವಾ ಮೂಲದ ವಿದ್ಯಾರ್ಥಿ ನೇವಿಲ್ ಸಲ್ದಾನಾ ಫೆರ್ನಾಂಡಿಸ್ ಆತ್ಮಹತ್ಯೆಗೆ ಸಂಬಂಧಿಸಿ ನಗರದ ಎಕ್ಸ್ಪರ್ಟ್ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಅಧ್ಯಾಪಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಧರಣಿ ನಡೆಸಿದರು.
ಎಲ್ಲ ಪಿಯು ಕಾಲೇಜುಗಳನ್ನು ಬಂದ್ ನಡೆಸಿದ ವಿದ್ಯಾರ್ಥಿಗಳು, ನೇವಿಲ್ ಸಲ್ದಾನಾ ಫೆರ್ನಾಂಡಿಸ್ ಆತ್ಮಹತ್ಯೆ ಮಾಡಲು ಎಕ್ಸ್ಪರ್ಟ್ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರೇ ಕಾರಣ. ತನ್ನ ಡೆತ್ನೋಟ್ನಲ್ಲೂ ನೇವಿಲ್ ಕೃತ್ಯಕ್ಕೆ ಕಾರಣ ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಆಪಾದಿಸಿದರು.
ಆತ್ಮಹತ್ಯೆಗೈದ ವಿದ್ಯಾರ್ಥಿಯ ಕುಟುಂಬಕ್ಕೆ ಪರಿಹಾರ ನೀಡಬೇಕು, ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು.
ಸಂಘದ ರಾಜ್ಯ ಸಲಹೆಗಾರ, ನ್ಯಾಯವಾದಿ ದಿನಕರ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ (ಪಿಜಿ) ಸಂಘದ ಅಧ್ಯಕ್ಷ ಭಾತೇಶ್ ಅಳಕೆಮಜಲು, ಸಂಘದ (ಪಿಯು) ಅಧ್ಯಕ್ಷ ನಿಹಾಲ್ ರೈ, ಉಪಾಧ್ಯಕ್ಷ ಹಿತೇಶ್, ರಾಜ್ಯ ಕಾರ್ಯದರ್ಶಿ ಆಸ್ಟೆಲ್ ಲೋಬೊ, ಸಂಘದ (ಇಂಜಿನಿಯರಿಂಗ್) ಅಧ್ಯಕ್ಷ ಸುಶಾಂತ್ ರೊಡ್ರಿಗಡ್, ಸಂಘದ (ಪಿಜಿ) ಪ್ರಧಾನ ಕಾರ್ಯದರ್ಶಿ ಮಜೀದ್, ಜನನ್ ಶೆಟ್ಟಿ, ಶಾಫಿ, ಆಕಾಶ್, ಅಶ್ವಿತ್ ಅಡಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.